Dailyhunt Logo
  • Light mode
    Follow system
    Dark mode
    • Play Story
    • App Story
ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

Guaranteenews 2 days ago

ವದೆಹಲಿ:ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ತಮ್ಮ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್.

ಚಂದೂರ್ಕರ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಾಧ್ಯವಿಲ್ಲ: ಕೋರ್ಟ್

ಚುನಾವಣೆಗಳು ನಡೆಯುತ್ತಿರುವಾಗ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು ಎಂಬುದು ಸುಸ್ಥಾಪಿತ ಕಾನೂನು ನಿಲುವಾಗಿದೆ ಎಂದು ಹೇಳಿದ ಪೀಠ, ನಾಮಪತ್ರ ತಿರಸ್ಕಾರದ ವಿರುದ್ಧ ಚುನಾವಣಾ ಅರ್ಜಿ ಸಲ್ಲಿಸುವುದಷ್ಟೇ ಸದ್ಯಕ್ಕಿರುವ ಕಾನೂನು ಪರಿಹಾರ ಎಂದು ಸ್ಪಷ್ಟಪಡಿಸಿದೆ. ಲ್ಯಾಂಡ್‌ಮಾರ್ಕ್ 'ಪೊನ್ನುಸ್ವಾಮಿ' ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಕೋರ್ಟ್, ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ತಲೆಹಾಕುವುದಿಲ್ಲ ಎಂಬ ನಿಲುವನ್ನು ಮತ್ತೊಮ್ಮೆ ದೃಢಪಡಿಸಿತು.

ನಾಮಪತ್ರ ತಿರಸ್ಕಾರವು ಮೇಲ್ನೋಟಕ್ಕೆ ತಪ್ಪು ಎಂದು ಕಂಡುಬಂದರೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ಕೆಲವು ಪ್ರಕರಣಗಳಲ್ಲಿ ವಿನಾಯಿತಿ ನೀಡುತ್ತಾ ಹೋದರೆ, ಅದು ಸಂವಿಧಾನದಲ್ಲಿ ಇಲ್ಲದ ಹೊಸ ವಿನಾಯಿತಿಯನ್ನು ಸೃಷ್ಟಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನಾಮಪತ್ರ ತಿರಸ್ಕಾರಕ್ಕೆ ಕಾರಣವೇನು?

ಮೀನಾಕ್ಷಿ ನಟರಾಜನ್ ಅವರು ಸಲ್ಲಿಸಿದ್ದ 'ಫಾರಂ 26' ಅಫಿಡವಿಟ್ ಅಪೂರ್ಣವಾಗಿತ್ತು ಮತ್ತು ಅವರ ವಿರುದ್ಧ ಬಾಕಿ ಇರುವ ಖಾಸಗಿ ದೂರು ಪ್ರಕರಣದ ವಿವರಗಳನ್ನು ಅವರು ಮುಚ್ಚಿಟ್ಟಿದ್ದರು ಎಂಬ ಕಾರಣ ನೀಡಿ ಚುನಾವಣಾಧಿಕಾರಿ (ರಿಟರ್ನಿಂಗ್ ಆಫೀಸರ್) ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಈ ದೂರು ಪ್ರಕ್ರಿಯೆಗೆ ಸಂಬಂಧಿಸಿದಂತೆ ನಟರಾಜನ್ ಅವರು ಈ ಹಿಂದೆ ಲಿಖಿತ ಸಲ್ಲಿಕೆಗಳನ್ನು ಮಾಡಿದ್ದರಿಂದ, ಅವರಿಗೆ ಈ ಪ್ರಕರಣದ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದನ್ನು ಚುನಾವಣಾಧಿಕಾರಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದರು.

ಅರ್ಜಿದಾರರ ವಾದವೇನು?

ನಟರಾಜನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಫ್ಟಿ ಅವರು, 'ಈ ಅರ್ಜಿಯು ಚುನಾವಣೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ, ಬದಲಿಗೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ಖಚಿತಪಡಿಸಿಕೊಳ್ಳಲು ಸಲ್ಲಿಕೆಯಾಗಿದೆ. ದೂರು ದಾಖಲಾಗಿರುವ ಪ್ರಕರಣದಲ್ಲಿ ಇನ್ನು ನ್ಯಾಯಾಲಯ ಯಾವುದೇ ಸಂಜ್ಞೆ (Cognizance) ತೆಗೆದುಕೊಂಡಿಲ್ಲ ಅಥವಾ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಿಲ್ಲ. ಹೀಗಿರುವಾಗ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ,' ಎಂದು ವಾದಿಸಿದರು. ಅಪರೂಪದ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬಹುದು ಎಂಬ ಹಳೆಯ ತೀರ್ಪುಗಳನ್ನು ಅವರು ಉಲ್ಲೇಖಿಸಿದರು.

ಪ್ರತಿವಾದಿಗಳ ನಿಲುವು

ಇದನ್ನು ಚುನಾವಣಾ ಆಯೋಗ ಮತ್ತು ಎದುರಾಳಿ ಅಭ್ಯರ್ಥಿ ತೀವ್ರವಾಗಿ ವಿರೋಧಿಸಿದರು. 'ಚುನಾವಣೆಯಲ್ಲಿ ಸ್ಪರ್ಧಿಸುವುದು ಶಾಸನಬದ್ಧ ಹಕ್ಕಾಗಿದ್ದು, ನಾಮಪತ್ರ ತಿರಸ್ಕೃತಗೊಂಡರೆ ಚುನಾವಣೆ ಮುಗಿದ ಬಳಿಕ ಚುನಾವಣಾ ಅರ್ಜಿ ಸಲ್ಲಿಸುವುದಷ್ಟೇ ಏಕೈಕ ಮಾರ್ಗ. ಸಂವಿಧಾನದ ವಿಧಿ 32 ಅಥವಾ 226ರ ಅಡಿಯಲ್ಲಿ ಪ್ರಕ್ರಿಯೆಯ ಮಧ್ಯೆ ಇದನ್ನು ಪ್ರಶ್ನಿಸಲು ಬರುವುದಿಲ್ಲ,' ಎಂದು ಪ್ರತಿವಾದ ಮಂಡಿಸಿದರು.

ಜೂನ್ 10 ರಂದು ಚುನಾವಣಾ ಆಯೋಗದ ಮುಂದೆ ಹಾಜರಿ

ನಾಮಪತ್ರ ತಿರಸ್ಕಾರದ ವಿರುದ್ಧ ಮೀನಾಕ್ಷಿ ನಟರಾಜನ್ ಅವರು ಜೂನ್ 10 ರಂದು ಚುನಾವಣಾ ಆಯೋಗದ ಮುಂದೆ ಖುದ್ದಾಗಿ ಹಾಜರಾಗಿ ವಾದ ಮಂಡಿಸಿದ್ದರು. ಆದರೆ ಆಯೋಗದಿಂದ ಯಾವುದೇ ಆದೇಶ ಹೊರಬಿದ್ದಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಆದರೆ ಸುಪ್ರೀಂ ಕೋರ್ಟ್ ಸಹ ಅವರಿಗೆ ಆಶ್ವಾಸನೆ ನೀಡಲಿಲ್ಲ.

ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಮೀನಾಕ್ಷಿ ನಟರಾಜನ್ ಅವರು ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ದಾರಿ ಮುಚ್ಚಲಾಗಿದೆ. ಅವರು ಈಗ ಆಯ್ಕೆಯಾದರೆ, ಚುನಾವಣೆ ಮುಗಿದ ಬಳಿಕ ಚುನಾವಣಾ ಅರ್ಜಿ ಸಲ್ಲಿಸುವುದೊಂದೇ ಮಾರ್ಗ. ಆದರೆ ಅದು ಸುದೀರ್ಘ ಪ್ರಕ್ರಿಯೆಯಾಗಿದೆ.

ಮೀನಾಕ್ಷಿ ನಟರಾಜನ್ ಅವರು ಸದ್ಯಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಅವರು ಚುನಾವಣಾ ಆಯೋಗದ ಮುಂದೆ ತಮ್ಮ ವಾದವನ್ನು ಮುಂದುವರಿಸುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews