ಬೆಂಗಳೂರು : ಶಾಲಾ ತಪಾಸಣೆ ಅಥವಾ ಭೇಟಿಯ ಸಂದರ್ಭದಲ್ಲಿ ಅಧಿಕಾರಿಗಳು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಶಿಕ್ಷಕರನ್ನು ಏಕವಚನದಲ್ಲಿ ಸಂಬೋಧಿಸುವುದು ಅಥವಾ ಬೈಯುವುದನ್ನು ನಿಲ್ಲಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು ಅವರು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಶಿಕ್ಷಕರು ಸಮಾಜದ ಮತ್ತು ಶಾಲಾ ವ್ಯವಸ್ಥೆಯ ಬೆನ್ನೆಲುಬು. ವಿದ್ಯಾರ್ಥಿಗಳು ಶಿಕ್ಷಕರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಅಧಿಕಾರಿಗಳು ತಪಾಸಣೆ ಅಥವಾ ಭೇಟಿಯ ಸಮಯದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಶಿಕ್ಷಕರನ್ನು ಏಕವಚನದಲ್ಲಿ ಸಂಬೋಧಿಸುವುದು ಅಥವಾ ಬೈಯುವುದು ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ. ಮಕ್ಕಳ ಮುಂದೆ ಶಿಕ್ಷಕರು ಅವಮಾನಕ್ಕೊಳಗಾದಾಗ, ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿರುವ ಗೌರವ ಕಡಿಮೆಯಾಗುತ್ತದೆ. ಇದು ಶಾಲಾ ಶಿಸ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕವಾಗಿ ಟೀಕೆ ಮಾಡುವುದರಿಂದ ಶಿಕ್ಷಕರ ನೈತಿಕ ಧೈರ್ಯ ಕುಸಿಯುತ್ತದೆ. ತಪ್ಪುಗಳಿದ್ದಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಕಚೇರಿಯಲ್ಲಿ ಅಥವಾ ಶಿಕ್ಷಕರ ಕೊಠಡಿಯಲ್ಲಿ ಸಮಾಲೋಚನೆ ನಡೆಸಿ ಸರಿಪಡಿಸುವುದು ಹೆಚ್ಚು ಪರಿಣಾಮಕಾರಿ. ಶೈಕ್ಷಣಿಕ ಸುಧಾರಣೆಗೆ ವಿಮರ್ಶೆ ಅಗತ್ಯ, ಆದರೆ ಅದು ಗೌರವಾನ್ವಿತ ರೀತಿಯಲ್ಲಿರಬೇಕು. ಅಧಿಕಾರಿಗಳು ಸಂವಹನ ಮಾಡುವಾಗ ವೃತ್ತಿಪರ ನಡವಳಿಕೆಯನ್ನು ಕಾಯ್ದುಕೊಳ್ಳಲು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸುವ ಅಗತ್ಯತೆ ಇದೆ.
ಮುಂದುವರೆದು ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಇಲಾಖೆಯ ಕೆಳಹಂತದ ಎಲ್ಲಾ ಅಧಿಕಾರಿಗಳಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮುಂದೆ ಶಿಕ್ಷಕರನ್ನು ನಿಂದಿಸದಂತೆ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.


