
ಚಿತ್ರದುರ್ಗ : ಜಾನುಕೊಂಡದಿಂದ ವಿದ್ಯುತ್ ಪೂರೈಕೆ ಮಾಡುವ ಪ್ರಯತ್ನ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ, ಈಚಘಟ್ಟ ಎಂ.ಯು.ಎಸ್.ಎಸ್.ನಿಂದ ರೈತರಿಗೆ ಪೂರೈಸಲಾಗುತ್ತಿದ್ದ ವಿದ್ಯುತ್ನ್ನು ಏಕಾಏಕಿ ನಿಲ್ಲಿಸಿ ಜಾನುಕೊಂಡದಿಂದ ವಿದ್ಯುತ್ ಸರಬರಾಜು ಮಾಡುವ ಪ್ರಯತ್ನಕ್ಕೆ ಕೈಹಾಕಿರುವುದರಿಂದ ನುಲೇನೂರು, ತೊಡರನಾಳು, ಬಂಜಗೊಂಡನಹಳ್ಳಿ ಭಾಗದ ರೈತರುಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎನ್ನುವುದನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈಚಘಟ್ಟದಲ್ಲಿ ಓವರ್ಲೋಡ್ ಆಗಿದೆ ಎನ್ನುವ ನೆಪ ಹೇಳಿ ರೈತರಿಗೆ ತೊಂದರೆ ಕೊಡುವುದನ್ನು ನಾವುಗಳು ಸಹಿಸುವುದಿಲ್ಲ.
ಮೊದಲಿನಂತೆ ಈಚಘಟ್ಟ ಎಂ.ಯು.ಎಸ್.ಎಸ್.ನಿಂದ ವಿದ್ಯುತ್ ಪೂರೈಕೆಯಾದಾಗ ಮಾತ್ರ ಈ ಭಾಗದ ರೈತರು ತಮ್ಮ ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಜಿ.ಟಿ.ಪ್ರಭಾಕರ್, ಜಿ.ಬಿ.ಶೇಖರ್, ಜಿ.ಈಶ್ವರಪ್ಪ, ಹೆಚ್.ನಾರಪ್ಪ, ಗಂಗಾಧರ್, ಕುಮಾರ್, ಅನಿಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜಗದೀಶ್, ತೀರ್ಥಪ್ರಸಾದ್ ಭಾಗವಹಿಸಿದ್ದರು.