ಬೆಂಗಳೂರು: 'ನನ್ನ ಸಿನಿಮಾ ಎರಡು ಸಂದರ್ಭಗಳಲ್ಲಿ ನಡೆಯುವಂಥದ್ದು. ಈ ಹೊತ್ತಿಗೆ ಅದನ್ನು ಕಟ್ಟಿ ಕೊಡಲು ಪ್ರಯತ್ನಿಸಿದ್ದೇನೆ' ಎಂದು ಪ್ರಸಿದ್ಧ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.
ಬೆಂಗಳೂರು ಚಿತ್ರೋತ್ಸವದಲ್ಲಿ ಶನಿವಾರ ಪ್ರದರ್ಶನಗೊಂಡ ಅವರ ಹೊಸ ಚಲನಚಿತ್ರ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಯ ಕುರಿತು ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬಹಳ ವರ್ಷಗಳಿಂದ ಕವಿ ಜಯಂತ ಕಾಯ್ಕಿಣಿಯವರ ಕಥೆಯನ್ನು ಚಲನಚಿತ್ರ ಮಾಡಬೇಕೆಂದಿದ್ದೆ. ಈ ಚಿತ್ರ ಎರಡು ಸಂದರ್ಭಗಳಲ್ಲಿ ನಡೆಯುತ್ತದೆ. ಒಂದು- 1970 ರಲ್ಲಿ ಎರಡು- 2000 ದಲ್ಲಿ. ಎರಡೂ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.
ಸಿಂಕ್ ಸೌಂಡ್ ಪದ್ದತಿ ಪ್ರಚಲಿತದಲ್ಲಿದ್ದು, ಯಾಕೆ ನಿಮ್ಮ ಚಿತ್ರಗಳಲ್ಲಿ ಅದನ್ನು ಅನ್ವಯಿಸುವುದಿಲ್ಲ ಎಂಬ ಪ್ರಶ್ನೆಗೆ, ಜಗತ್ತಿನೆಲ್ಲೆಡೆ ಅ ಪದ್ಧತಿ ಪ್ರಚಲಿತದಲ್ಲಿದೆ.
ಆದರೆ ನಾನು ತೆಗೆಯುವ ಸಿನಿಮಾಗಳಿಗೆ ಕಷ್ಟ. ನಾನು ಯಾವಾಗಲೂ ಹವ್ಯಾಸಿ ನಟರೊಂದಿಗೆ ಹಾಗೂ ಸ್ಥಳೀಯ ನಟರನ್ನು ಬಳಸುತ್ತೇನೆ. ಅದಕ್ಕೆ ಕಷ್ಟ. ಜತೆಗೆ ತೀರಾ ವೆಚ್ಚದಾಯಕವಾಗಿರುವುದರಿಂದ ಸ್ವಲ್ಪ ಕಷ್ಟ. ಈ ಚಿತ್ರದಲ್ಕಿ ಹೊಸ ಪ್ರಯೋಗ ಮಾಡ ಬೇಕೆಂದಿದ್ದೆ. ನನ್ನ ಅನಾರೋಗ್ಯ ಕಾರಣದಿಂದ ಸಾಧ್ಯವಾಗಲಿಲ್ಲ ಎಂದರು.
ಚಿತ್ರದ ನಿರ್ಮಾಪಕ ಶಿವಕುಮಾರ್ ಮಾತನಾಡಿ, ಗಿರೀಶ್ ಅವರೊಂದಿಗೆ ಸಿನಿಮಾ ಮಾಡುವುದೇ ಹೊಸ ಅನುಭವ. ಹಿಂದೆ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ ಇವರೊಂದಿಗೆ ಕೆಲಸ ಮಾಡುತ್ತಾ ಸಿನಿಮಾ ಮಾಡುವುದನ್ನು ಕಲಿತೆ ಎಂದರು.
ನಮ್ಮ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ಬಂದಿದೆ. ನಿನ್ನೆಯ ಪ್ರದರ್ಶನ ಕ್ಕೂ ಚಿತ್ರಂಮದಿರ ತುಂಬಿ ಸಾಕಷ್ಟು ಜನರಿಗೆ ಅವಕಾಶ ಸಿಗಲಿಲ್ಲ. ಇಂದು ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನವಿದೆ. ಇನ್ನು ಮೂರು ದಿನಗಳಲ್ಲಿ ಮತ್ತೊಮ್ಮೆ ಪ್ರದರ್ಶನ ಮಾಡಲು ಅವಕಾಶವನ್ನು ಚಿತ್ರೋತ್ಸವ ಸಮಿತಿಯಲ್ಲಿ ಕೇಳಿದ್ದೇವೆ' ಎಂದರು.
ಒಟಿಟಿ ಫ್ಲಾಟ್ ಫಾರಂಗಳ ಕುರಿತಾದ ಪ್ತಶ್ನೆಗೆ ಉತ್ತರಿಸಿ, ಕನ್ನಡದ ಹೊಸ ಅಲೆ ಚಲನಚಿತ್ರಗಳಿಗೆ ಚಿತ್ರಮಂದಿರ ಸಿಗುವುದು ಕಷ್ಟವಾಗಿರುವ ಈ ಹೊತ್ತಿನಲ್ಲಿ ಒಟಿಟಿ ಫ್ಲಾಟ್ ಪಾರ್ಮ್ ನಂಥ ವೇದಿಕೆಗಳಿಂದ ಅನುಕೂಲವಾಗಬಲ್ಲದು. ಪ್ರೇಕ್ಷಕರನ್ನು ತಲುಪಬಹುದು ಎಂದರು.
ಮಲಯಾಳಂ ಚಿತ್ರ 'ಬಿರಿಯಾನಿ' ಕುರಿತು ವಿವರಿಸಿದ ಚುತ್ರ ನಿರ್ದೇಶಕ ಸಜಿನ್ ಬಾಬು, ಇದರ ಕಥಾವಸ್ತು ನಿತ್ಯ ಸಮಾಜದಲ್ಲಿರುವಂಥದ್ದೇ. ನನ್ನ ಸುತ್ತಮುತ್ತಲಿನವರಲ್ಲಿ ಈ ಕಥಾವಸ್ತು ಕುರಿತು ಹಲವು ಬಾರಿ ಚರ್ಚಿಸಿದ್ದೆ. ಅದನ್ನು ತೆರೆಗೆ ತಂದಿದ್ದೇನೆ ಎಂದು ಹೇಳಿದರು. ಚಿತ್ರೋತ್ಸವ ಮಾ. 4 ರವರೆಗೂ ನಡೆಯಲಿದೆ.

