ಶಿವಮೊಗ್ಗ: ಅಡಿಕೆ ಬೇಯಿಸುವ ವೇಳೆ ಹಂಡೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ನಗರದ ವಡ್ಡಿನಕೊಪ್ಪದ ಜೇನು ಕುಮಾರ್ ಎಂದು ಗುರುತಿಸಲಾಗಿದೆ.
ಸೆ. 8ರಂದು ಜೇನು ಕುಮಾರ್ ಅವರು ಮನೆಯ ಸಮೀಪದ ಶೆಡ್ನಲ್ಲಿ ಅಡಿಕೆ ಬೇಯಿಸುತ್ತಿದ್ದರು.
ಬಳಿಕ ಹಂಡೆಯಿಂದ ಅಡಿಕೆ ಹೊರತೆಗೆದು, ಒಳಗಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಏರಿದ್ದರು. ಈ ವೇಳೆ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದಾರೆ.
ಘಟನೆ ವೇಳೆ ಶೆಡ್ನಲ್ಲೇ ಇದ್ದ ಇತರ ಮೂವರು ಕೂಡಲೇ ಜೇನು ಕುಮಾರ್ ಅವರನ್ನು ಹಂಡೆಯಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಅವರು ಶೆಡ್ನಿಂದ ಹೊರಗೆ ಓಡಿ ಹೋಗಿ ಶರ್ಟ್ ತೆಗೆದು ಮತ್ತೆ ಶೆಡ್ನೊಳಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು.
ತಕ್ಷಣ ಜೇನು ಕುಮಾರ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಜೇನು ಕುಮಾರ್ ಹಂಡೆಯೊಳಗೆ ಬೀಳುವ ದೃಶ್ಯ ಶೆಡ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

