ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ ಬಹುಭಾಷಾ ಖ್ಯಾತ ನಟಿ ರೋಜಾ ಅವರು ಆಗಮಿಸುತ್ತಿದ್ದಾರೆ.
ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ವೀರಕಪುತ್ರ ಶ್ರೀನಿವಾಸ ಅವರು ಇಂದು ರೋಜಾ ಅವರ ನಿವಾಸಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿ ಪ್ರೀತಿಯ ಸ್ವಾಗತ ಕೋರಿದರು.
ಈ ಭೇಟಿಯ ವೇಳೆ ಆಹ್ವಾನ ಪತ್ರಿಕೆಯ ಮೇಲಿದ್ದ ಡಾ. ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ನೋಡಿದ ತಕ್ಷಣ ರೋಜಾ ಅವರ ಬಾಯಿಂದ ಬಂದ ಮೊದಲ ಪದ "ಲೆಜೆಂಡ್". ಬಳಿಕ ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಚಿತ್ರರಂಗದ ಸಾಧನೆ ಹಾಗೂ ಅವರೊಂದಿಗಿನ ನೆನಪುಗಳ ಕುರಿತು ರೋಜಾ ಅವರು ಅಪಾರ ಪ್ರೀತಿಯಿಂದ ಮಾತನಾಡಿದರು.
"ಯಜಮಾನ್ರ ಫೋಟೋ ನೋಡಿದ ತಕ್ಷಣ ಅವರ ಬಾಯಿಂದ ಬಂದ ಮೊದಲ ಪದ 'ಲೆಜೆಂಡ್'. ಆಮೇಲೆ ಅದೆಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ… ಅದನ್ನೆಲ್ಲ ಈಗಲೇ ಹೇಳುವುದಿಲ್ಲ. ಅಮೃತ ಮಹೋತ್ಸವದ ವೇದಿಕೆಯಲ್ಲೇ ಅವರ ಮಾತುಗಳಲ್ಲಿ ಕೇಳೋಣ," ಎಂದು ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

