ನವದೆಹಲಿ: ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಅಗತ್ಯವಿರುವ ಭೂಮಿಯನ್ನು ಗುರುತಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮತ್ತೆ ನಿರ್ದೇಶನ ನೀಡಿದೆ. ಹಿಂದಿನ ಆದೇಶವನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಆದೇಶ ಪಾಲನೆಗೆ ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.
ನವೋದಯ ಶಾಲೆಗಳ ತ್ರಿಭಾಷಾ ನೀತಿ ತಮಿಳುನಾಡಿನ ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ. ಈ ಶಾಲೆಗಳ ಮೂಲಕ ಹಿಂದಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುವ ಸಾಧ್ಯತೆಯಿದ್ದು, ಇದರಿಂದ ತಮಿಳು ಭಾಷೆಯ ಸ್ಥಾನಕ್ಕೆ ಧಕ್ಕೆಯಾಗಬಹುದು ಎಂಬುದು ಸರ್ಕಾರದ ಆಕ್ಷೇಪವಾಗಿದೆ.
ವಿಚಾರಣೆ ವೇಳೆ ರಾಜ್ಯದ ಪರ ಹಿರಿಯ ವಕೀಲ ಜಯದೀಪ್ ಗುಪ್ತಾ, ಶಿಕ್ಷಣ ನೀತಿ ಹಾಗೂ ಭಾಷಾ ನೀತಿಯ ವಿಚಾರದಲ್ಲಿ ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆ ಎರಡೂ ದಿಕ್ಕಿನಿಂದಲೂ ಇರಬೇಕು ಎಂದು ವಾದಿಸಿದರು. ನವೋದಯ ಶಾಲೆಗಳ ವೆಚ್ಚದ ಹೊರೆ ರಾಜ್ಯದ ಮೇಲೂ ಬೀಳಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಶಾಲೆಗಳಿಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಬೇಕಿದ್ದು, ಉಳಿದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದೇ ವೇಳೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಭೂಮಿ ಗುರುತಿಸುವಂತೆ ನೀಡಿರುವ ಹಿಂದಿನ ನಿರ್ದೇಶನವನ್ನು ಪಾಲಿಸಲು ರಾಜ್ಯಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 14ರಂದು ನಡೆಯಲಿದೆ.

