ಶಿವಮೊಗ್ಗ: ಇರಾನ್-ಇಸ್ರೇಲ್ ಯುದ್ಧದ ಜಾಗತಿಕ ಪರಿಣಾಮ ಇದೀಗ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣಕ್ಕೂ ತಟ್ಟಿದ್ದು, ಪೆಟ್ರೋಲ್ ಕೊರತೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಒಟ್ಟು 6 ಪೆಟ್ರೋಲ್ ಬಂಕ್ಗಳಲ್ಲಿ 5 ಬಂಕ್ಗಳಲ್ಲಿ "ನೋ ಸ್ಟಾಕ್" ಫಲಕ ಹಾಕಲಾಗಿದ್ದು, ಉಳಿದ ಒಂದು ಬಂಕ್ ಮುಂದೆ ವಾಹನ ಸವಾರರು ಮುಗಿಬಿದ್ದಿದ್ದಾರೆ.
ಇಂಧನದ ಕೊರತೆಯಿಂದ ಉಂಟಾದ ಆತುರದ ನಡುವೆಯೇ ಬಂಕ್ನಲ್ಲಿ ನೂಕುನುಗ್ಗಲು ಉಂಟಾಗಿ, ಗ್ರಾಹಕರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಬಾಟಲಿಗಳೊಂದಿಗೆ ಪೆಟ್ರೋಲ್ ಪಡೆಯಲು ಮುಂದಾದಾಗ, ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಬಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದಾಗಿ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದು, ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಾಟ ನಡೆಸಿದ ಘಟನೆ ನಡೆದಿದೆ.
ಸೊರಬ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಹಿನ್ನೆಲೆ, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೆಟ್ರೋಲ್ ಸರಬರಾಜು ಸಮಸ್ಯೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

