ಬಾಗಲಕೋಟೆ: ಜಮಖಂಡಿ ತಾಲೂಕಿನ ಕವಟಗಿ ಗ್ರಾಮದಲ್ಲಿ ಬಬಲೇಶ್ವರ-ತುಬಚಿ ಏತನೀರಾವರಿ ಯೋಜನೆಯ ಮುಖ್ಯ ಪೈಪ್ಲೈನ್ ಒಡೆದು ಬೃಹತ್ ಪ್ರಮಾಣದಲ್ಲಿ ನೀರು ಆಕಾಶದತ್ತ ಚಿಮ್ಮಿದ ಘಟನೆ ನಡೆದಿದೆ.
ಪೈಪ್ಲೈನ್ ಸಂಪೂರ್ಣವಾಗಿ ಹಾನಿಗೊಳಗಾದ ಪರಿಣಾಮ ನೀರು ಭಾರೀ ವೇಗದಲ್ಲಿ ಮೇಲಕ್ಕೆ ಚಿಮ್ಮಿದ್ದು, ಸುತ್ತಮುತ್ತಲಿನ ಹೊಲಗದ್ದೆಗಳು ಹಾಗೂ ರಸ್ತೆಗಳಿಗೆ ನೀರು ಹರಿದಿದೆ.
ಇದರಿಂದ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ರೈತರ ಬೆಳೆಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ.
ಪೈಪ್ಲೈನ್ ಒಡೆದು ನೀರು ಗಗನದೆತ್ತರಕ್ಕೆ ಚಿಮ್ಮಿದ ದೃಶ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಘಟನೆಯ ವಿಡಿಯೋ ಹಾಗೂ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆದಿವೆ.
ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ರೈತರು ಆತಂಕಗೊಂಡಿದ್ದು, ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈಪ್ಲೈನ್ ದುರಸ್ತಿ ಮಾಡಿ ನೀರು ಪೋಲಾಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

