ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿರುವಲ್ಲಾದಲ್ಲಿ ನಡೆದ ಭಾರಿ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ರಾಜ್ಯದ ಆಡಳಿತ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶದ ವಿದೇಶಾಂಗ ಹಿತಾಸಕ್ತಿಗಳನ್ನು ಹಾನಿಗೊಳಿಸುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಹೇಳಿಕೆಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ಭದ್ರತೆಗೆ ಧಕ್ಕೆ ಉಂಟಾಗಬಹುದು ಎಂದು ಎಚ್ಚರಿಸಿದರು.
"ರಾಜಕೀಯಕ್ಕಿಂತ ಜನರ ಸುರಕ್ಷತೆ ನನಗೆ ಪ್ರಮುಖ. ಚುನಾವಣೆಗಳು ತಾತ್ಕಾಲಿಕ, ಆದರೆ ಜನರ ಭದ್ರತೆ ಶಾಶ್ವತ ಜವಾಬ್ದಾರಿ" ಎಂದು ಮೋದಿ ಹೇಳಿದರು. ಕೇರಳದ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಲ್ಡಿಎಫ್ ಮತ್ತು ವಿರೋಧ ಪಕ್ಷದ ಯುಡಿಎಫ್ ವಿರುದ್ಧವೂ ತೀವ್ರ ಟೀಕೆ ವ್ಯಕ್ತಪಡಿಸಿದ ಮೋದಿ, ಎರಡೂ ಮೈತ್ರಿಗಳು ವರ್ಷಗಳ ಕಾಲ ರಾಜ್ಯವನ್ನು ಅಭಿವೃದ್ಧಿಯಿಂದ ದೂರವಿಟ್ಟಿವೆ ಎಂದು ಆರೋಪಿಸಿದರು. ಈ ಬಾರಿ ಜನತೆ ಬದಲಾವಣೆಗೆ ಸಿದ್ಧರಾಗಿದ್ದು, ಎನ್ಡಿಎಗೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮೂಲಸೌಕರ್ಯಗಳ ದುಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಅವರು, ಸಂಪರ್ಕ ರಸ್ತೆಗಳು ಹಾಳಾಗಿರುವುದು, ಸೇತುವೆಗಳ ಕೊರತೆ ಮತ್ತು ಆರೋಗ್ಯ ಸೇವೆಗಳ ಹಿಂದುಳಿದ ಸ್ಥಿತಿಯನ್ನು ಉಲ್ಲೇಖಿಸಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಆದ್ಯತೆಯಾಗಿ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.

