ಬಳ್ಳಾರಿ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಆಟೋಮ್ಯಾಟಿಕ್ ಮೊಬೈಲ್ ಆಪ್ ಆಧಾರಿತ ಕೇಜ್ ಲಾಕಿಂಗ್ ಸಿಸ್ಟಂ ಬಳಸಿ ಒಂದೇ ವೇಳೆ ಮೂರು ಕರಡಿಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.
ಜಿಲ್ಲೆಯ ತೋರಣಗಲ್ ಸಮೀಪದ ಜಿಂದಾಲ್ನ ವಿದ್ಯಾನಗರ ಟೌನ್ಶಿಪ್ನಲ್ಲಿ ಕಳೆದ 10 ತಿಂಗಳಿನಿಂದ ಒಂದು ಕರಡಿ ಮತ್ತು ಅದರ ಎರಡು ಮರಿಗಳು ತಂಗಿದ್ದವು.
ಪ್ರತಿದಿನ ಈ ಕರಡಿಗಳ ಸಂಚಲನದಿಂದ ಜಿಂದಾಲ್ ಕಾರ್ಮಿಕರು, ನೌಕರರು ಹಾಗೂ ಸ್ಥಳೀಯ ನಿವಾಸಿಗಳು ಭೀತಿಗೆ ಒಳಗಾಗಿದ್ದರು.
ಈ ಹಿನ್ನೆಲೆದಲ್ಲಿ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿ, ನವೀನ ತಂತ್ರಜ್ಞಾನವನ್ನು ಉಪಯೋಗಿಸಿ ಒಂದೇ ಸಮಯದಲ್ಲಿ ಮೂರು ಕರಡಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ಸು ಸಾಧಿಸಿದೆ. ಮೊಬೈಲ್ ಆಪ್ ಮೂಲಕ ಕೇಜ್ಗಳನ್ನು ನಿಯಂತ್ರಿಸಿ ಲಾಕ್ ಮಾಡುವ ವ್ಯವಸ್ಥೆ ಈ ಕಾರ್ಯಾಚರಣೆಯ ಪ್ರಮುಖ ಹೈಲೈಟ್ ಆಗಿತ್ತು.
ಸೆರೆ ಹಿಡಿದ ಕರಡಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ನಂತರ ಅವುಗಳನ್ನು ಸುರಕ್ಷಿತವಾಗಿ ಕರಡಿ ಧಾಮಕ್ಕೆ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಾಚರಣೆ ಅರಣ್ಯ ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಮಾದರಿಯಾಗಿದೆ.

