ಗುಂಟೂರು: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ತರಗತಿಯಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೇಟಪಾಲೆಂನಲ್ಲಿ ನಡೆದಿದೆ. ಮೃತರನ್ನು ಇಂಕೊಳ್ಳು ಗ್ರಾಮದ ವೀರಬಾಬು (45) ಎಂದು ಗುರುತಿಸಲಾಗಿದೆ.
ಇವರು ವಾಕಾವರಿ ಪಾಲೆಂನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಗಾಬರಿಗೊಂಡ ವಿದ್ಯಾರ್ಥಿಗಳು ತಕ್ಷಣ ಇತರ ವಿದ್ಯಾರ್ಥಿಗಳಿಗೆ (Students) ಮಾಹಿತಿ ನೀಡಿದ್ದು, ಅವರು ಆಂಬ್ಯುಲೆನ್ಸ್ಗೆ ಕರೆ ಮಾಡಿ ಶಿಕ್ಷಕರನ್ನು ಹತ್ತಿರದ ಆಸ್ಪತ್ರೆಗೆ (Hospital) ಸಾಗಿಸಿದ್ದಾರೆ. ಆದರೆ ಅಷ್ಟರಲ್ಲೇ ವೀರಬಾಬು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಈ ಮೂಲಕ ತಮ್ಮ ದೈನಂದಿನ ಕಾರ್ಯಗಳಿಗೆ ಹಾಜರಾಗುವ ವ್ಯಕ್ತಿಗಳು ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಘಟನೆಗಳ ಸರಣಿ ಹೆಚ್ಚಾಗ್ತಿದೆ. ತರಗತಿಯಲ್ಲಿ ಕೆಲವೇ ನಿಮಿಷಗಳಲ್ಲಿ ಇಡೀ ಘಟನೆ ಸಂಭವಿಸಿದ್ದರಿಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಆಘಾತಕ್ಕೊಳಗಾದರು. ಶಿಕ್ಷಕರ ಸಾವಿನಿಂದ (Teachers death) ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.

