ಬೆಂಗಳೂರು:"ಬಿಜೆಪಿ ನಾಯಕರು ಪ್ರತಿಭಟನಾ ಸಭೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪ್ರತಿಭಟನೆಗೆ ತಡೆಯೊಡ್ಡುವುದಿಲ್ಲ. ಅವರು ಎಷ್ಟು ದೊಡ್ಡ ಮೈದಾನ ಕೇಳುತ್ತಾರೋ ಅಷ್ಟು ದೊಡ್ಡ ಮೈದಾನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಶಿವಾಜಿನಗರದ ಸೇಂಟ್ ಮೇರಿಸ್ ಬ್ಯಾಸಿಲಿಕಾ ಚರ್ಚ್ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಪ್ರತಿಭಟನಾ ಸಭೆಗೆ ಅನುಮತಿ ನೀಡದಿರುವ ಬಗ್ಗೆ ಕೇಳಿದಾಗ, "ಪ್ರತಿಭಟನೆ ನಡೆಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದರು.
"ಬಿಜೆಪಿಯವರು ಬೇಕಾದಷ್ಟು ಪತ್ರಿಕಾಗೋಷ್ಠಿ ನಡೆಸಲಿ. ನೂರಾರು ಹೇಳಿಕೆಗಳನ್ನು ನೀಡಲಿ ಆರೋಪಗಳನ್ನೂ ಮಾಡಲಿ. ಇದಕ್ಕೆ ಸರ್ಕಾರ ತಡೆಯೊಡ್ಡುವುದಿಲ್ಲ. ಪ್ರತಿಭಟನೆ ಹಾಗೂ ಹೋರಾಟ ಮಾಡುವುದು ಎಲ್ಲರ ಹಕ್ಕು" ಎಂದು ಹೇಳಿದರು.
"36 ಗಂಟೆ ಪ್ರತಿಭಟನೆಗೆ ನಿರ್ಬಂಧ ಎಂಬುದು ಬಿಜೆಪಿ ಮಾಡುತ್ತಿರುವ ಆರೋಪ. ಬಿಜೆಪಿ ಸುಮ್ಮನೆ ಮಾಧ್ಯಮಗಳನ್ನು ತಪ್ಪುದಾರಿಗೆ ಎಳೆಯುತ್ತಿದೆ" ಎಂದು ಹೇಳಿದರು.
ಎನ್ ಡಿಎ ಆರೋಪ ಸುಳ್ಳಿನ ಕಂತೆ:
"ಎನ್ ಡಿಎ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ಅವರ ದೇಹದ ತುಂಬಾ ಸುಳ್ಳಿನ ಕಂತೆ ತುಂಬಿಕೊಂಡಿದೆಯೇನೋ ಎಂಬಂತಾಗಿದೆ" ಎಂದು ವಾಗ್ದಾಳಿ ನಡೆಸಿದರು.
ಸುಳ್ಳೇ ಬಿಜೆಪಿ ಮನೆ ದೇವರು:
"ಸಿದ್ದರಾಮಯ್ಯನವರು ಹೇಳಿದಂತೆ, ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಸರ್ಕಾರ ಮಾತ್ರ ಕಾನೂನಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸಲಿದೆ" ಎಂದು ಹೇಳಿದರು.

