ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ನಡುವೆಯೇ ಚಿತ್ರತಂಡದ ಹೇಳಿಕೆಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ನಿರ್ದೇಶಕ ಆರ್ಜೆ ಬಾಲಾಜಿ ಹಾಗೂ ಎಡಿಟರ್ ಆರ್. ಕಲೈವಾಣನ್ ನೀಡಿದ ಹೇಳಿಕೆಗಳು ಸೂರ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಬಾಲಾಜಿ ಅವರು 'ಕರುಪ್ಪು' ಕಥೆಯನ್ನು ಮೊದಲಿಗೆ ನಟ ದಳಪತಿ ವಿಜಯ್ ಅವರಿಗೆ ಹೇಳಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಕೆಲ ಕಾರಣಗಳಿಂದ ಅವರು ಸಿನಿಮಾದಲ್ಲಿ ನಟಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜೊತೆಗೆ ಇತ್ತೀಚೆಗೆ ವಿಜಯ್ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡು 'ಕರಪ್ಪು ಚಿತ್ರವನ್ನು ಆರಂಭಿಸಿದ ವ್ಯಕ್ತಿ' ಎಂದು ಬರೆದುಕೊಂಡಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹೇಳಿಕೆಗಳು ಸೂರ್ಯ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಸಿನಿಮಾದ ಯಶಸ್ಸಿನಲ್ಲಿ ಸೂರ್ಯ ಅವರ ಪಾತ್ರವನ್ನು ಕಡೆಗಣಿಸಿ ವಿಜಯ್ ಅವರಿಗೆ ಅನಗತ್ಯ ಕ್ರೆಡಿಟ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಚಿತ್ರದ ಎಡಿಟರ್ ಆರ್. ಕಲೈವಾಣನ್ ಸಂದರ್ಶನವೊಂದರಲ್ಲಿ 'ವಿಜಯ್ ನಟಿಸಿದ್ದರೆ ದೃಶ್ಯಗಳು ಇನ್ನಷ್ಟು ಬ್ಲಾಸ್ಟಿಂಗ್ ಆಗುತ್ತಿತ್ತು' ಎಂದು ನೀಡಿದ ಹೇಳಿಕೆ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ಅಭಿಮಾನಿಗಳ ಆಕ್ರೋಶ ಹೆಚ್ಚಿದ ಹಿನ್ನೆಲೆಯಲ್ಲಿ ಕಲೈವಾಣನ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ನಟ ಸೂರ್ಯ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಪ್ರೀತಿಯಿಂದ ಮುನ್ನಡೆಯಿರಿ. ದಯೆ ಇರಲಿ. ಉದಾರವಾಗಿರಿ' ಎಂಬ ನಿಗೂಢ ಸಂದೇಶ ಹಂಚಿಕೊಂಡಿದ್ದು ಗಮನ ಸೆಳೆದಿದೆ.

