ತಮಿಳುನಾಡು: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿರುವ ಕುರಿತು ಉಂಟಾದ ಚರ್ಚೆಗೆ ಕೆ. ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ. ಪಕ್ಷ ಟಿಕೆಟ್ ನಿರಾಕರಿಸಿಲ್ಲ, ತಾನೇ ಸ್ಪರ್ಧಿಸದಂತೆ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹೈಕಮಾಂಡ್ಗೆ ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿದ್ದೆ. ನನ್ನ ನಿರ್ಧಾರವನ್ನು ಗೌರವಿಸಿದ ನಾಯಕತ್ವಕ್ಕೆ ಧನ್ಯವಾದಗಳು" ಎಂದರು.
ತಾವು ಸ್ಪರ್ಧಿಸದೇ ಇದ್ದರೂ, ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸುವುದಾಗಿ ಹೇಳಿದರು. "ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೋರ್ ಕಮಿಟಿಗೂ ತಿಳಿಸಿದ್ದೆ" ಎಂದು ಅವರು ವಿವರಿಸಿದರು.
"ನಾನು ಸ್ಪರ್ಧಿಸಲು ಆಸಕ್ತಿ ತೋರಿಸದಿದ್ದಾಗ ಪಕ್ಷ ಟಿಕೆಟ್ ನೀಡದಿರುವ ಪ್ರಶ್ನೆಯೇ ಇಲ್ಲ. ನಾನು ನಿರ್ಧರಿಸಿದ್ದರೆ ಯಾವ ಕ್ಷೇತ್ರದಿಂದಲಾದರೂ ಸ್ಪರ್ಧಿಸಬಹುದಿತ್ತು. ಆದರೆ ಈಗ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನನ್ನ ಗುರಿ" ಎಂದು ಅಣ್ಣಾಮಲೈ ಹೇಳಿದರು.

