ಬೆಂಗಳೂರು : ಚಂದನವನ ಉದ್ಯಮ ಹರಾಜು ಹಾಕೋದು ನೋಡಿದ್ರೆ ಹೊಟ್ಟೆಗೆ ಆಯಸಿಡ್ ಕುಡಿದಂತೆ ಆಗಿದೆ ಎಂದು ಹಿರಿಯ ನಟ, ನವರಸನಾಯಕ ಜಗ್ಗೇಶ್ ನಶೆಕೋರರ ವಿರುದ್ಧ ಬೇಸರ ಹೊರ ಹಾಕಿದ್ದಾರೆ. ನಮ್ಮದು ಗೋಲ್ಡನ್ ದಿನಗಳು. ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿಕೊಳ್ಳುವ ಕಾಲ ಅದಾಗಿತ್ತು. ತಿನ್ನಲು ಅನ್ನವಿಲ್ಲದಿದ್ದರು ಮುಖದಲ್ಲಿ ನಗು ಮಾಸುತ್ತಿರಲಿಲ್ಲ. ಗೆದ್ದಮೇಲೆ ಯಶಸ್ಸು ತಲೆಗೆ ಏರಲಿಲ್ಲ. ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರು ಬಿಸಾಕಿ ಗೌರವದಿಂದ ಬದುಕಿದವರು. ಬದುಕನ್ನ ಪ್ರೀತಿಸಿ ಬೆಳೆದವರು. ಪ್ರೀತಿಗಾಗಿ ಬದುಕಿದ ತಲೆಮಾರು ನಮ್ಮದು ಎಂದು ತಮ್ಮ ಹಳೆಯ ದಿನಗಳನ್ನು ಜಗ್ಗೇಶ್ ಮೆಲಕು ಹಾಕಿಕೊಂಡಿದ್ದಾರೆ.
ಉಪ್ಪು ತಿಂದವರು ನೀರು ಕುಡಿಯಲಿ
ಈ ಹಿಂದೆಯೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಜಗ್ಗೇಶ್, ನಾನು ನನ್ನ ಕನಸು, ಅನ್ನ ಜೀವನ ಅಂತ ಬಂದವರ ಕಾಲಮಾನದವ ವ್ಯಕ್ತಿ.
ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು. ನಮ್ಮ ಕಾಲದ ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2 ಪೆಗ್ಗೆ ಸೀಮಿತವಾಗಿತ್ತು. ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ. ಇದರ ಬಗ್ಗೆ ಮಾತಾಡಿದರೆ ಸಾಕು ಪರ-ವಿರೋಧದ ಅನಿಷ್ಠ ಮನದ ನೆಮ್ಮದಿಗೆ ಭಂಗ ತರುತ್ತದೆ.
ಯಾಕೆ ಬೇಕು ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅದು ಅವರವರ ಹಣೆಬರಹ. ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ. ಇತ್ತ ಸ್ಟಾರ್ ದಂಪತಿ ದಿಗಂತ್ ಮಂಚಾಲೆ-ಐಂದ್ರಿತಾ ರೇ, ನಿರೂಪಕ ಕಂ ನಟರಾದ ಅಕುಲ್ ಬಾಲಾಜಿ ಹಾಗೂ ಸಂತೋಷ್ ಕುಮಾರ್ ಅವರನ್ನ ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದಾರೆ. ಖ್ಯಾತ ಆಯಂಕರ್ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿಯ ಹೆಸರು ಪ್ರಕರಣದಲ್ಲಿ ಥಳಕು ಹಾಕಿಕೊಂಡಿದೆ.

