ಉತ್ತರ ಪ್ರದೇಶ : ತ್ರಿವಳಿ ತಲಾಖ್ ಕಾನೂನು ಬಾಹಿರವಾಗಿದ್ದರೂ ಕೂಡ ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿವೋರ್ವ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ. ಅಜೀಂ ನಗರ ನಿವಾಸಿ ಶಯರೂಲ್ ಅವರ ವಿವಾಹ ತಾಂಡಾ ನಿವಾಸಿ ಅನೀಶ್ ಜೊತೆ ಆಗಿತ್ತು.
ಮದುವೆಯಾದ ಕೆಲವು ದಿನಗಳ ನಂತರ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಲಾರಂಭಿಸಿದ್ದಾರೆ. ನೊಂದ ಮಹಿಳೆ ಈ ಸಂಬಂಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ರಾಂಪುರ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಹೇಳಿಕೆಗಳನ್ನು ದಾಖಲಿಸಲು ಶಯರೂಲ್ ಕೋರ್ಟ್ಗೆ ಬಂದ ವೇಳೆ ಅನೀಶ್ ತ್ರಿವಳಿ ತಲಾಖ್ ನೀಡಿ ಪರಾರಿಯಾಗಿದ್ದಾನೆ.
2019ರ ಆಗಸ್ಟ್ 1 ರಂದು ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಲಾಗಿದ್ದು, ತನ್ನ ಹೆಂಡತಿಗೆ ಮೂರು ಬಾರಿ ತಲಾಖ್ ಎಂದು ಉಚ್ಚರಿಸುವ ಯಾವುದೇ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ.

