Dailyhunt

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ ಬಳಲುತ್ತಿದ್ದ 'ಥಲಾ' ಇತ್ತೀಚೆಗೆ ನೆಟ್ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ 5ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆಯ ಬಗ್ಗೆ ಕುತೂಹಲ ಮೂಡಿದೆ.

ಧೋನಿ ಈ ಸೀಸನ್‌ನ ಮೊದಲ ಎರಡು ವಾರಗಳ ಕಾಲ ಸ್ನಾಯು ಸೆಳೆತದ ಸಮಸ್ಯೆಯಿಂದ ರೆಸ್ಟ್‌ನಲ್ಲಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ಅವರು ಆಡಲು ಸಾಧ್ಯವಾಗಿರಲಿಲ್ಲ. ಆದರೆ ಬುಧವಾರ ನಡೆದ ನೆಟ್ ಪ್ರಾಕ್ಟೀಸ್ ಸೆಷನ್‌ನಲ್ಲಿ ಧೋನಿ ಬ್ಯಾಟ್ ಹಿಡಿದು ಅಭ್ಯಾಸ ಮಾಡಿದ್ದು, ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಸಿಎಸ್‌ಕೆ ತಂಡ ಇತ್ತೀಚೆಗೆ ರಾಜಸ್ಥಾನ್ ವಿರುದ್ಧ ಹೀನಾಯ ಸೋಲು ಕಂಡಿದೆ. ಇಂದು (ಏಪ್ರಿಲ್ 3) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಲಯಕ್ಕೆ ಮರಳುವ ತವಕದಲ್ಲಿದೆ. ಧೋನಿ ಇದ್ದರೆ ತಂಡಕ್ಕೆ ಅನುಭವಿ ಮಾರ್ಗದರ್ಶನ ಸಿಗುತ್ತದೆ ಎಂಬ ಆಶಯ ಅಭಿಮಾನಿಗಳಲ್ಲಿದೆ. ಆದರೆ ಇಂದಿನ ಪಂದ್ಯಕ್ಕೆ ಧೋನಿ ಲಭ್ಯರಾಗುವುದು ಅನುಮಾನವಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಪಂದ್ಯವನ್ನು ಅಭಿಮಾನಿಗಳು ಬದ್ಧ ವೈರಿಗಳ ನಡುವಿನ ಯುದ್ಧ ಎಂದೇ ಪರಿಗಣಿಸುತ್ತಾರೆ. ಕಳೆದ ಸೀಸನ್‌ನಲ್ಲಿ ಚೆನ್ನೈ ಆರ್‌ಸಿಬಿ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಬಾರಿ ಫಾರ್ಮ್ ಸುಧಾರಿಸುವ ಗುರಿಯೊಂದಿಗೆ ಸಿಎಸ್‌ಕೆ ಕಣಕ್ಕಿಳಿಯುತ್ತಿದೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ನಡುವಿನ ಮತ್ತೊಂದು ರೋಚಕ ಎದುರಾಟ ನಡೆಯುವ ನಿರೀಕ್ಷೆಯಿದೆ. ಧೋನಿ ಆಡಿದರೆ ಚಿನ್ನಸ್ವಾಮಿ ಅಭಿಮಾನಿಗಳಿಗೆ ಖಾಸಾ ಟ್ರೀಟ್ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Andolana