ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಟ್ಟಹಳ್ಳಿ ಗ್ರಾಮದ ಲೇಟ್ ಕೃಷ್ಣೇಗೌಡರ ಮಗ ಪ್ರವೀಣ (೪೦)ಆತ್ಮಹತ್ಯೆ ಮಾಡಿಕೊಂಡ ರೈತ.
ಬೆಟ್ಟಹಳ್ಳಿ ಗ್ರಾಮದಲ್ಲಿ ಪ್ರವೀಣ ಅವರಿಗೆ ೪ ಎಕರೆ ಜಮೀನು ಇದ್ದು, ತಂಬಾಕು ಬೆಳೆ ಬೆಳೆಯಲು ಪಕ್ಕದ ಸೋಮನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಇತರೆ ಕಡೆಗಳಲ್ಲಿ ಅಂದಾಜು ೧೩ ಲಕ್ಷ ರೂ. ಕೈಸಾಲ ಮಾಡಿದ್ದು, ತಂಬಾಕು ಬೆಳೆಗೆ ಈ ಬಾರಿ ಉತ್ತಮ ಬೆಲೆ ಸಿಗದೇ ಸಾಲಗಾರರ ಒತ್ತಡ ಹೆಚ್ಚಾಗಿ ಮನನೊಂದು ಮಂಗಳವಾರ ಸಂಜೆ ಜಮೀನಿನಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಮ ಎಂದು ಅವರ ಸಹೋದರ ಪ್ರದೀಪ ಸಾಲಿಗ್ರಾಮ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
