Dailyhunt Logo
  • Light mode
    Follow system
    Dark mode
    • Play Story
    • App Story

ಮೂರು ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ ; ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ 3 ದಿನಗಳ ಮೊದಲೇ ತೆರೆ ಬಿದ್ದಿದೆ.

ಆಗಸ್ಟ್​​ 13ರಿಂದ 27ರ ವರೆಗೆ ಮಳೆಗಾಲದ ಅಧಿವೇಶನ ನಡೆಸಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು.

ಆದರೀಗ ಮೂರು ದಿನಗಳ ಮುಂಚಿತವಾಗಿಯೇ ಅಂದರೆ ಆಗಸ್ಟ್​​ 24ರಂದೇ ವಿಧಾನ ಸಭೆ ಮತ್ತು ಪರಿಷತ್​​ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

'ವಿಪಕ್ಷಗಳಿಗೆ ಹೆದರಿ ಸರ್ಕಾರ ಓಡಿದೆ'
ರಾಜ್ಯ ಸರ್ಕಾರದ ನಡೆ ವಿರುದ್ಧ ವಿಧಾನ ಸಭೆಯ ವಿಪಕ್ಷ ನಾಯಕ ಆರ್. ಅಶೋಕ್​​ ವಾಗ್ದಾಳಿ ನಡೆಸಿದ್ದು, ​20-30 ವರ್ಷಗಳಲ್ಲಿ ಮೊದಲ ಬಾರಿ ವಿಪಕ್ಷಗಳಿಗೆ ಹೆದರಿ ಸರ್ಕಾರ ಓಡಿದೆ. ಸಭಾಧ್ಯಕ್ಷರು ಸರಿಯಾದ ರೀತಿ ಸದನವನ್ನೇ ನಡೆಸಿಲ್ಲ. ಕಾಂಗ್ರೆಸ್ ರಾಜಕೀಯ ಮಾಡಬಹುದು, ನಾವು ಮಾಡಲ್ಲ. ದಲಿತರ ಹಣ ನುಂಗಿದ್ದಾರೆ, ಆ ಹಣ ವಾಪಸಾಗಬೇಕು. ಶೇ.5ರಷ್ಟು ಪಾರ್ಕ್​​ಗಳನ್ನು ಲೂಟಿ ಮಾಡುವುದಕ್ಕೆ ಹೊರಟಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಹಿಂಬಾಗಿಲಿನಿಂದ ಓಡಿ ಹೋಗಿದೆ. ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ನಡೆಯುತ್ತಿರುವ ಸರ್ಕಾರ. ದಲಿತರ ಹಣ ಲೂಟಿ ಮಾಡಿದವರ ಬಗ್ಗೆ ಅವರಿಗೆ ಭಯ ಕಾಡುತ್ತಿದೆ. ಇವರ ಬಣ್ಣ ಬಯಲಾಗುತ್ತದೆ, ಭ್ರಷ್ಟಾಚಾರ ಬಯಲಿಗೆ ಬರುತ್ತದೆ ಎಂದು ನಾಗೇಂದ್ರರನ್ನು ರಕ್ಷಣೆ ಮಾಡ್ತಿದ್ದಾರೆ. 85 ಕೋಟಿ ಹಗರಣ ಎಂದು ಸ್ವತಃ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದರು. ಇಷ್ಟಾದ್ರೂ ಕೂಡ ಸರ್ಕಾರ ಭಂಡತನದಿಂದ ಮೆರೆಯುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರಿಗೆ ದೂರು ಸಲ್ಲಿಕೆ
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದಿಂದ ಲೋಕಭವನಕ್ಕೆ ಬಿಜೆಪಿ ಶಾಸಕರು ಪಾದಯಾತ್ರೆ ನಡೆಸಿದ್ದು, ಸಚಿವ ನಾಗೇಂದ್ರ ವಿಚಾರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕರು ಕೂಡ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Andolana