ವಿಜಯಪುರ: ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಿರುವ ಐದು ರಾಫೆಲ್ ಯುದ್ಧ ವಿಮಾನಗಳ ಪೈಕಿ ಒಂದು ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದು ಓರ್ವ 'ಹೆಮ್ಮೆಯ ಕನ್ನಡಿಗ'.
ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ರಾಫೆಲ್ ಯುದ್ಧ ವಿಮಾನದ ಆಗಮನ ಪೂರ್ಣವಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಲಟ್ ಗಳ ತಂಡದಲ್ಲಿ ಕರ್ನಾಟಕ ಮೂಲದ ಓರ್ವ ಪೈಲಟ್ ಕೂಡ ಇದ್ದಾರೆ.
ವಿಜಯಪುರ ಸೈನಿಕ ಶಾಲೆಯಲ್ಲಿ ಅಭ್ಯಾಸ ಪಡೆದ 35 ವರ್ಷದ ವಿಂಗ್ ಕಮಾಂಡರ್ ಅರುಣ್ ಕುಮಾರ್ ಅವರು ರಾಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ಚಲಾಯಿಸಿಕೊಂಡು ಬಂದಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಅರುಣ್ ಕುಮಾರ್ 1995ರಿಂದ 2001ರ ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸೈನಿಕ ಶಾಲೆಯಲ್ಲಿನ ಇವರ ನೋಂದಣಿ ಸಂಖ್ಯೆ 2877 ಆಗಿತ್ತು ಎನ್ನಲಾಗಿದೆ. ಬಳಿಕ 2002ರಲ್ಲಿ ನ್ಯಾಷನಲ್ ಡಿಫೆನ್ಸ್ ಆರ್ಮಿಗೆ ಸೇರ್ಪಡೆಯಾಗಿ ಈಗ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ಅರುಣ್ ಕುಮಾರ್ ಅವರ ತಂದೆ ಎನ್ ಪ್ರಸಾದ್ ಸಹ ಏರ್ಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು. ಪುತ್ರ ಅರುಣ್ ಅವರ ಸಾಧನೆಗೆ ಅವರ ತಂದೆ ಪ್ರಸಾದ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

