ಸುದ್ದಿಗಳು
ಉತ್ತಮ ಚಿತ್ರಗಳ ಸರದಾರ

ಹುಣಸೂರು ಕೃಷ್ಣಮೂರ್ತಿ - ಶ್ರೇಷ್ಠ ಕನ್ನಡ ಚಲನಚಿತ್ರ ನಿರ್ದೇಶಕರು. ಡಾ.ರಾಜ್ಕುಮಾರ್ ಅವರ ಸತ್ಯ ಹರಿಶ್ಚಂದ್ರ , ಬಭ್ರುವಾಹನ , ಭಕ್ತ ಕುಂಬಾರ ಅಂತ ಮೈಲಿಗಲ್ಲು ಸಿನೆಮಾಗಳನ್ನು ನಿರ್ದೇಶನ ಮಾಡಿದ ಅಪಾರ ಕೀರ್ತಿ ಹುಣಸೂರರಿಗೆ ಸಲ್ಲುತ್ತದೆ.
ಕನ್ನಡ ಚಿತ್ರರಂಗದಲ್ಲಿ ಉದಯಿಸಿದ ಹಲವಾರು ಅದ್ಭುತ ಸಾಧಕರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತಹ ಹೆಸರು ಅಂದರೆ ಅದು ಹುಣಸೂರು ಕೃಷ್ಣಮೂರ್ತಿ.
ಅವರದ್ದು ಉತ್ತಮ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗ ಬೇರೆ ಭಾಷೆಯ ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿದ ಕೀರ್ತಿ ಕೂಡ ಅವರಿಗೆ ಸಲ್ಲಬೇಕು. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಭಾಷಣೆಕಾರನಾಗಿ, ಚಿತ್ರ ಸಾಹಿತಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿ 'ಸತ್ಯ ಹರಿಶ್ಚಂದ್ರ' ಚಿತ್ರದ ಸ್ಮಶಾನ ದೃಶ್ಯದ ಅಮೋಘ ಅಭಿನಯವನ್ನು ಇದುವರೆಗೆ ಯಾರು ಮಾಡಲು ಸಾಧ್ಯವಾಗಿಲ್ಲ , ಅಂತಹ ಅಭಿನಯ ತೆಗೆಸಿದ ಕೀರ್ತಿ ಹುಣಸೂರರಿಗೆ ಸಲ್ಲುತ್ತದೆ.
ಅಷ್ಟೇ ಅಲ್ಲದೇ ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಉತ್ತಮ ಸಾಹಿತ್ಯಕ್ಕೆ ಒತ್ತು ಕೊಡುತ್ತಿದ್ದ ಹುಣಸೂರು ಕೃಷ್ಣಮೂರ್ತಿ ಯವರು 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ'…ನಗು ನಗುತಾ ನಲಿ…ರಂಗ ವಿಠಲ…ಪಾಂಡುರಂಗ ವಿಠಲ…ಕುಲದಲ್ಲಿ ಕೀಳಾವುದೊ ಹುಚ್ಚಪ್ಪ… ಕುಲದಲ್ಲಿ ಮೇಲಾವುದೋ…ಸೇರಿದಂತೆ ಅನೇಕ ಜನಪ್ರಿಯ ಚಿತ್ರ ಸಾಹಿತ್ಯ ಕೊಟ್ಟ ಹೆಗ್ಗಳಿಕೆಗ ಪಾತ್ರರಾಗಿದ್ದಾರೆ. 'ಭೂತಯ್ಯನ ಮಗ ಅಯ್ಯು' ಸಿನೆಮಾಗೆ ಸಂಭಾಷಣೆ ಬರೆದು ಪ್ರಶಸ್ತಿ ಪಡೆದಿರುವ ಇವರು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ರಂಗ ಭೂಮಿ ನಂಟು ಪಡೆದು ಪೌರಾಣಿಕ, ಐತಿಹಾಸಿಕ ,ಜನಪದ ಮತ್ತು ಸಾಮಾಜಿಕ ಸಿನೆಮಾಗಳನ್ನು ನಿರ್ದೇಶನ ಮಾಡಿದ್ದಾರೆ .
ಕನ್ನಡ ತೆಲುಗು ಮಲಯಾಳಂ ಭಾಷೆಗಳ ಚಿತ್ರ ನಿರ್ದೇಶನ ಮಾಡಿದ್ದಾರೆ.ಇವರ ಸೋದರಳಿಯ ದ್ವಾರಕೀಶ್, ನಿರ್ದೇಶಕ ಭಾರ್ಗವ ಸಂಬಂಧಿ…ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿ, ಸಂಭಾಷಣೆಕಾರರಾಗಿ ಯಶಸ್ವಿಯಾಗಿದ್ದ ಹುಣಸೂರು ಕೃಷ್ಣಮೂರ್ತಿ ಅವರನ್ನ ಅತ್ಯುತ್ತಮ ಚಲನಚಿತ್ರ ನಿರ್ಮಾತೃ ಅಂತ ಹೇಳಲೆಬೇಕು.
@ರಾಜು ಸೂನಗಹಳ್ಳಿ