Dailyhunt
ಗೊಬ್ಬರ ಕೊಳ್ಳುವ ರೈತರಿಗೆ ಮುಖ್ಯಮಾಹಿತಿ ಎಫ್‍ಐಡಿ ಸಂಖ್ಯೆ ಕಡ್ಡಾಯ.!

ಗೊಬ್ಬರ ಕೊಳ್ಳುವ ರೈತರಿಗೆ ಮುಖ್ಯಮಾಹಿತಿ ಎಫ್‍ಐಡಿ ಸಂಖ್ಯೆ ಕಡ್ಡಾಯ.!

ಚಿತ್ರದುರ್ಗ: 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ರೈತರ ಎಫ್‍ಐಡಿ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.

ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶದ ಮೂಲಕ, ರೈತರ ಎಫ್‍ಐಡಿ ಸಂಖ್ಯೆಯನ್ನು ಬಳಸಿಕೊಂಡು ಅವರು ಹೊಂದಿರುವ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಯೂರಿಯಾ ಅಗತ್ಯವಿದೆಯೋ ಅಷ್ಟನ್ನು ಮಾತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಸಂಪೂರ್ಣ ಪ್ರಕ್ರಿಯೆಯು 'ಕೆ-ಕಿಸಾನ್’ ತಂತ್ರಾಂಶದ ಮೂಲಕವೇ ನಡೆಯಲಿದೆ.

ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವುದು, ರೈತರು ಮಿತವ್ಯಯವಾಗಿ ಗೊಬ್ಬರ ಬಳಸುವಂತೆ ಮಾಡುವುದು ಹಾಗೂ ಮಾರಾಟದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ. ಇನ್ನೂ ಎಫ್‍ಐಡಿ ಹೊಂದಿಲ್ಲದ ರೈತರು ತಕ್ಷಣವೇ ತಮ್ಮ ಪಹಣಿ, ಬ್ಯಾಂಕ್ ಪಾಸ್‍ಬುಕ್ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಹೊಸದಾಗಿ ಎಫ್‍ಐಡಿ ಸೃಜಿಸಿಕೊಳ್ಳಬೇಕು. ಈಗಾಗಲೇ ಎಫ್‍ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೇ ನಂಬರ್‍ಗಳನ್ನು ಅದಕ್ಕೆ ಜೋಡಣೆ ಮಾಡಿಸಿಕೊಳ್ಳಲು ಅವಕಾಶವಿದೆ.

ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್‍ಐಡಿ ನಮೂದಿಸಿ ಯೂರಿಯಾ ಮಾರಾಟ ಮಾಡಬೇಕು. ಒಂದು ವೇಳೆ ‘ಓ’ ಫಾರಂ ನವೀಕರಿಸದೆ ಮಾರಾಟ ಮಾಡಿದರೆ, ನಿಗದಿಪಡಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಿದರೆ ಅಥವಾ ಕೃಷಿಯೇತರ ಉದ್ದೇಶಗಳಿಗೆ ಯೂರಿಯಾ ಸರಬರಾಜು ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಮಾರಾಟಗಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.

ಯೂರಿಯಾ ದಾಸ್ತಾನು ಪರಿಶೀಲನೆ: ಕೃಷಿ ಇಲಾಖೆ ಬೆಂಗಳೂರು ಕೇಂದ್ರ ಕಚೇರಿಯ ಜಾರಿದಳದ ಜಂಟಿ ಕೃಷಿ ನಿರ್ದೇಶಕ ಸಿ.ವಿಧ್ಯಾನಂದ ಹಾಗೂ ಟಿ.ಎನ್.ಅಶೋಕ್ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲೆಯ ವಿವಿಧ ಗೋದಾಮುಗಳಿಗೆ ಭೇಟಿ ನೀಡಿ, ಯೂರಿಯಾ ಸಂಬಂಧಿತ ದಾಸ್ತಾನು ಪರಿಶೀಲನೆ ನಡೆಸಿದೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಉಪಕೃಷಿ ನಿರ್ದೇಶಕರಾದ ಕೆ.ಎನ್.ಶಿವಕುಮಾರ್, ಡಿ.ಉಮೇಶ್ ಸೇರಿದಂತೆ ಮತ್ತಿತರರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: BC Suddi