ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಪೋಷಕರ ವಿರೋಧ ಹಾಗೂ ಕಾನೂನು ಕ್ರಮದ ಭೀತಿಯಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಡೆದಿದೆ. ಮೃತರನ್ನು ಪಾಲಾರ್ ಗ್ರಾಮದ 19 ವರ್ಷದ ನದಿಯಾ ಮತ್ತು 21 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಇವರ ಪ್ರೀತಿಗೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ, ಜೊತೆಯಾಗಿ ಬದುಕಲು ನಿರ್ಧರಿಸಿದ ಈ ಜೋಡಿ ಮೂರು ದಿನಗಳ ಹಿಂದೆ ಮನೆಯಿಂದ ಓಡಿಹೋಗಿತ್ತು. ನಾಗೇಂದ್ರ ತನ್ನ ಪ್ರೇಯಸಿಯನ್ನು ಪೊನ್ನಾಚಿ ಗ್ರಾಮದಲ್ಲಿರುವ ತನ್ನ ಅಜ್ಜನ ಮನೆಗೆ ಕರೆದೊಯ್ದಿದ್ದನು.
ಮನೆಯಿಂದ ನಾಪತ್ತೆಯಾದ ಯುವತಿಯ ಬಗ್ಗೆ ಆತಂಕಗೊಂಡ ಕುಟುಂಬಸ್ಥರು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಗಾಬರಿಗೊಂಡ ಪ್ರೇಮಿಗಳು, ಪೊಲೀಸರಿಗೆ ಸಿಕ್ಕಿಬಿದ್ದರೆ ಮುಂದಿನ ಪರಿಸ್ಥಿತಿ ಏನಾಗಬಹುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಸಮಾಜ ಮತ್ತು ಕುಟುಂಬದವರನ್ನು ಎದುರಿಸಲಾಗದೆ ಹಾಗೂ ಪೊಲೀಸರ ಭೀತಿಯಿಂದಾಗಿ ಮನನೊಂದ ಜೋಡಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಒಟ್ಟಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ವೈಫಲ್ಯ ಅಥವಾ ಪೋಷಕರ ಮದುವೆ ನಿರಾಕರಣೆಯಂತಹ ಕಾರಣಗಳಿಂದ ಯುವಜನತೆ ದುಡುಕಿನ ನಿರ್ಧಾರ ಕೈಗೊಂಡು ಸಾವಿನ ಹಾದಿ ಹಿಡಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಪ್ರೀತಿಯ ಹೆಸರಿನಲ್ಲಿ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವ ಇಂತಹ ಘಟನೆಗಳು ಹನೂರು ಭಾಗದಲ್ಲಿ ತೀವ್ರ ಶೋಕವನ್ನುಂಟು ಮಾಡಿದ್ದು, ಒಂದು ಸಣ್ಣ ಭಯ ಇಬ್ಬರು ಯುವ ಜೀವಗಳನ್ನು ಬಲಿಪಡೆದಂತಾಗಿದೆ.
