Dailyhunt
ತಮಿಳುನಾಡು ಚುನಾವಣೆಗೆ ಕೇಸರಿ ಪಾಳಯ ಸಜ್ಜು: BJP ಅಭ್ಯರ್ಥಿಗಳ ಪಟ್ಟಿ ರಿಲೀಸ್‌, ಅಣ್ಣಾಮಲೈಗೆ ಶಾಕ್

ತಮಿಳುನಾಡು ಚುನಾವಣೆಗೆ ಕೇಸರಿ ಪಾಳಯ ಸಜ್ಜು: BJP ಅಭ್ಯರ್ಥಿಗಳ ಪಟ್ಟಿ ರಿಲೀಸ್‌, ಅಣ್ಣಾಮಲೈಗೆ ಶಾಕ್

Guaranteenews 1 week ago

ಚೆನ್ನೈ, ಏ. 3: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಒಂದೇ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿ ಅಧಿಕಾರಕ್ಕೇರಲೇಬೇಕೆಂದು ಬಿಜೆಪಿ ಪಣತೊಟ್ಟಿದ್ದು, ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ.

ಈ ಮಧ್ಯೆ ಕೇಸರಿ ಪಡೆ 27 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ, 'ಸಿಂಗಂ' ಖ್ಯಾತಿಯ ಕೆ. ಅಣ್ಣಾಮಲೈ (K. Annamalai) ಹೆಸರು ಇಲ್ಲ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿದ್ದಾರೆ?

ಏಪ್ರಿಲ್ 3 ರಂದು ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಿರಿಯ ನಾಯಕರಾದ ತಮಿಳಿಸೈ ಸೌಂದರ್ಯರಾಜನ್ (ಮೈಲಾಪೊರೆ ಕ್ಷೇತ್ರ), ವಾನತಿ ಶ್ರೀನಿವಾಸನ್ (ಕೊಯಂಬತ್ತೂರು ಉತ್ತರ) ಮತ್ತು ಕೇಂದ್ರ ಸಚಿವ ಎಲ್. ಮುರುಗನ್ (ಅವಿನಾಶಿ) ಹೆಸರು ಸೇರಿದೆ. ಅಣ್ಣಾಮಲೈ ಈ ಬಾರಿ ಸ್ಪರ್ಧಿಸುತ್ತಿಲ್ಲ. ಇದಕ್ಕೂ ಮುನ್ನವೇ ಅವರು ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು.

ಎಐಎಡಿಎಂಕೆ ಜತೆ ಮೈತ್ರಿ

ಎಐಎಡಿಎಂಕೆ ನೇತೃತ್ವದ ಎನ್ ಡಿಎ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಸೀಟ್ ಹಂಚಿಕೆ ಪೂರ್ಣಗೊಂಡಿದೆ. 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 169 ಕಡೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿಗೆ 27 ಸೀಟುಗಳನ್ನು ನೀಡಲಾಗಿದೆ. ಮೈತ್ರಿಕೂಟದ ಇತರ ಪಕ್ಷಗಳಾದ ಪಟ್ಟಲಿ ಮಕ್ಕಳ್ ಕಚ್ಚಿ (PMK) 18, ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) 11, ತಮಿಳ್ ಮಾನಿಳ ಕಾಂಗ್ರೆಸ್ (TMC) 5, ಮತ್ತು ಇಂಡಿಯಾ ಜನನಾಯಗನ್ ಕಚ್ಚಿ (IJK) ಹಾಗೂ ಪುರಚ್ಚಿ ಭರತಂ ತಲಾ 1 ಕ್ಷೇತ್ರದಲ್ಲಿ ಸ್ಪರ್ಧಿಸಲಿವೆ.

ಅಣ್ಣಾಮಲೈ ನಡೆಯೇನು?

ಎನ್ ಡಿಎ ಕ್ಷೇತ್ರ ಹಂಚಿಕೆಯಲ್ಲಿ ಬಿಜೆಪಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಅಣ್ಣಾಮಲೈ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದೀಗ ಅವರನ್ನು ಪಕ್ಷ ನಿಲರ್ಕ್ಷಿಸುತ್ತಿದೆ ಎಂಬ ವದಂತಿಗಳು ಹರಡಿವೆ. ಹೀಗಾಗಿ ಅಣ್ಣಾಮಲೈ ಅವರ ಮುಂದಿನ ನಡೆಯೇನು ಎಂಬ ಬಗ್ಗೆ ಕುತೂಹಲ ಮೂಡಿದೆ.

ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2020 ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅಣ್ಣಾಮಲೈ, ಲೋಕಸಭಾ ಚುನಾವಣೆಯ ವೇಳೆ ವಿಂಚನ್ ಪ್ರಚಾರ ನಡೆಸಿ ಗಮನ ಸೆಳೆದಿದ್ದರು.

ವೈಯಕ್ತಿಕ ಕಾರಣವೇನು?

ಕಳೆದ ವರ್ಷವೇ ವೈಯಕ್ತಿಕ ಕಾರಣ ನೀಡಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಸಲ್ಲಿಸಿದ್ದರು. 2023 ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ವಾದವಾಗಿತ್ತು. ಮತ್ತೊಮ್ಮೆ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಣ್ಣಾಮಲೈ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Guaranteenews