ಕೋಲಾರ,ಅ.29 (ಹಿ.ಸ) : ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿ ಕೆರೆಯು ಸಂಪೂರ್ಣ ತುಂಬಿದ್ದು, ಅಕ್ಟೋಬರ್ 28 ರಂದು ಬೆಳಗಿನ ಸಮಯದಲ್ಲಿ ಕೆರೆಯ ನೀರು ಕೋಡಿ ಹರಿದಿರುತ್ತದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಬಾಗದ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೆರೆ ಏರಿಯನ್ನು ತಾಂತ್ರಿಕವಾಗಿ ಪರಿಶೀಲಿಸಲಾಗಿದ್ದು ಸುರಕ್ಷಿತವಾಗಿರುತ್ತದೆ. ಕೆರೆ ಏರಿಗೆ ಯಾವುದೇ ದಕ್ಕೆ ಇರುವುದಿಲ್ಲ. ಕೆರೆ ಏರಿಯ ಹಿಂಭಾಗದಲ್ಲಿ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಮಣ್ಣನ್ನು ಹರಡಿ ಗಟ್ಟಿಗೊಳಿಸಲಾಗಿರುತ್ತದೆ. ಕೆರೆಯ ಏರಿ ಮತ್ತು ಕೋಡಿ ಸುಸ್ಥಿತಿಯಲ್ಲಿರುತ್ತದೆ.
ಕೋರಮಂಗಲ ಚಲ್ಲಘಟ್ಟ ವ್ಯಾಲಿ ಯೋಜನೆಯಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಒಟ್ಟು 126 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಅಭಿವೃದ್ಧಿ ಪಡಿಸುವ ಸರ್ಕಾರದ ಪ್ರತಿಷ್ಠಿತ ಯೋಜನೆಯಾಗಿರುತ್ತದೆ.
ಅಮ್ಮೇರಹಳ್ಳಿ ಕೆರೆ ಏರಿಯ ಮೇಲೆ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅಮ್ಮೇರಹಳ್ಳಿ ಕೆರೆಯಿಂದ ಕೋಲಾರ ಅಮಾನಿಕೆರೆಯವರೆಗಿನ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯಲು ಬೆಳೆದಿರುವ ಗಿಡ-ಗಂಟೆಗಳನ್ನು ತೆಗೆಯುವ ಕೆಲಸವು ಪ್ರಗತಿಯಲ್ಲಿರುತ್ತದೆ. ಅಮ್ಮೇರಹಳ್ಳಿ ಕೆರೆ ಏರಿಯು ಸುಭದ್ರವಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಠಪಡಿಸಿದ್ದಾರೆ.
