ಬಳ್ಳಾರಿ, 07 ಜುಲೈ (ಹಿ.ಸ.)
ಆಯಂಕರ್ : ಭೋವಿ ಸಮಾಜದ ಕುಲ ಗುರುಗಳಾದ ಇಮ್ಮಡಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯು ಜುಲೈ 18ರ ಶನಿವಾರ ಚಿತ್ರದುರ್ಗದ ಸಿದ್ದರಾಮೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಇರುವ ಸಮಾಜವನ್ನು ಒಗ್ಗೂಡಿಸಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಬೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ ರಾಮಾಂಜನೇಯಲು ಅವರು ತಿಳಿಸಿದ್ದಾರೆ.
ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ ಅವರು, ಬಳ್ಳಾರಿ ಜಿಲ್ಲೆಯಿಂದ 25 ಬಸ್ ಮತ್ತು 40 ಕಾರುಗಳಲ್ಲಿ ಭೋವಿ ವಡ್ಡರ ಸಮುದಾಯದ ಜನರು ಶ್ರೀ ಮಠಕ್ಕೆ ಹೋಗಿ ಶ್ರೀಗಳ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನವನ್ನು ನಮ್ಮ ಉತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಲಬುರಗಿ ಜಿಲ್ಲೆಯ ಸಮಾಜದ ಹಿರಿಯ ಮುಖಂಡರಾದ ಅಶೋಕ್ ಅವರು, ಕರ್ನಾಟಕ ಸರ್ಕಾರ ನಮ್ಮ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಲ್ಲಿ ಅನ್ಯಾಯ ಮಾಡಿದೆ. ಈ ಅನ್ಯಾಯವನ್ನು ಸರಿಪಡಿಸಲು ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶ್ರೀಗಳ ಜನ್ಮದಿನೋತ್ಸವಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ ಎಂದರು.
ನಮ್ಮ ಸಮಾಜದ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತದೆ.
ಭೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾದಿಲಿಂಗ, ಖಜಾಂಚಿ ಟಿ.ವಿ. ವೆಂಕಟೇಶ್ ಮತ್ತು ನಿರ್ದೇಶಕರುಗಳಾದ ಶ್ರೀಮನ್ನಾರಾಯಣ, ಅಂಬಣ್ಣ, ಗೋವಿಂದಪ್ಪ, ಎಪಿಎಂಸಿ ರಾಮಚಂದ್ರಪ್ಪ, ಆಕಾಶವಾಣಿ ರಾಮಾಂಜನೇಯ, ಪತ್ರಕರ್ತ ರವಿ ವೀರಾಪುರ್, ತೂರ್ಪು ವೆಂಕಟೇಶ್, ನಾಗಿರೆಡ್ಡಿ, ಗುಡೂರು ಹನುಮಂತ, ಅಂಗಡಿ ರಾಘವೇಂದ್ರ, ಗೋನಾಳ್ ಹುಲುಗಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಎಲ್ಲಮ್ಮ ಮತ್ತು ನಿರ್ದೇಶಕರಾದ ಅಂಜಲಿ, ಪಾರ್ವತಮ್ಮ, ಶೋಭಾರಾಣಿ ಸೇರಿದಂತೆ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

