Dailyhunt Logo
  • Light mode
    Follow system
    Dark mode
    • Play Story
    • App Story
ನಾಟಕಗಳು ಮಾನವೀಯ ಪ್ರತಿಬಿಂಬದ ಪ್ರತೀಕ : ಡಾ.ಸಿ ಬಸವಲಿಂಗಯ್ಯ

ನಾಟಕಗಳು ಮಾನವೀಯ ಪ್ರತಿಬಿಂಬದ ಪ್ರತೀಕ : ಡಾ.ಸಿ ಬಸವಲಿಂಗಯ್ಯ

ಬಳ್ಳಾರಿ, 01 ಜೂನ್ (ಹಿ.ಸ.) :

ಯಂಕರ್ : ಮನುಷ್ಯನಲ್ಲಿ ಮಾನವೀಯ ತುಡಿತ ಹಾಗೂ ತಮ್ಮದೇ ಪ್ರತಿಬಿಂಬ ತೋರಿಸಿಕೊಡುವುದೇ ನಾಟಕ ಕಲೆಯ ವೈಶಿಷ್ಟ್ಯ ಎಂದು ಮೈಸೂರಿನ ರಂಗಭೂಮಿ ನಿರ್ದೇಶಕ ಡಾ.ಸಿ ಬಸವಲಿಂಗಯ್ಯ ಅವರು ಹೇಳಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿ.

ಶ್ರೀಮತಿ ರಮಣಿಕ ಗುಪ್ತ ಅವರ ಸ್ಮರಣಾರ್ಥ ಅಂಗವಾಗಿ ಆಯೋಜಿಸಿರುವ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಗಳ ಪಾತ್ರಗಳು ಮಾನವನ ಭಾವನೆಗಳೊಂದಿಗಿನ ಆಟವಾಗಿವೆ. ಸೃಜನಶೀಲವಾದ ಸುಳ್ಳುಗಳ ಮೂಲಕ ಪಾತ್ರಗಳಿಗೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿ ಮನಗೆಲ್ಲುವುದೇ ನಾಟಕಗಳ ಜೀವಾಳವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಟಕಗಳು ಸುರ ಮತ್ತು ಅಸುರರ ನಡುವಿನ ಕಾದಾಟದಂತಿರುತ್ತವೆ. ಪ್ರತಿ ಕಲಾವಿದನು ವ್ಯಕ್ತಿತ್ವ, ಚಿತ್ರ, ಅಭಿನಯ ಮೂಲಕ ಚಲನವಲನ, ಮಾತುಗಾರಿಕೆ ಹಾಗೂ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲುಬೇಕು ಎಂದರು.

ಕಾಳಿದಾಸನು ಹೇಳಿರುವಂತೆ ಕಾವ್ಯೇಶು ನಾಟಕ ಬ್ರಹ್ಮೆ ಎಂಬ ಮಾತಿಗೆ ಪೂರಕವಾಗಿ ಮಹಾಶಿವನು ಒಬ್ಬ ಆದಿನಟನಂತಿದ್ದು, ಆತನ ಬಾಹ್ಯ ಪೋಷಾಕುಗಳು ಒಬ್ಬ ಕಲಾವಿದನನ್ನು ಸೂಚಿಸುತ್ತವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಮಾತನಾಡಿ, ಪತ್ರಕರ್ತರೇ ನಿಜವಾದ ಪ್ರೇಕ್ಷಕರಂತಿದ್ದು, ಜಗತ್ತಿನಲ್ಲಿ ನಡೆಯುವ ಎಲ್ಲ ಪ್ರಹಸನಗಳಿಗೂ ಪುರಾವೆಯಾಗಿರುತ್ತಾರೆ. ನಾಡಿನಲ್ಲಿ ನಡೆಯುವ, ನಡೆಯುತ್ತಿರುವ ಚಳುವಳಿಗಳಿಗೆ ಶಕ್ತಿ ಕೊಟ್ಟಿದ್ದೆ ರಂಗಭೂಮಿ. ಆದರೆ ಇತ್ತೀಚಿನ ದಿನಗಳಲ್ಲಿ 'ಭೂಮಿ'ಗೆ ತಲೆದೋರಿರುವ ನೈಸರ್ಗಿಕ ಸಮಸ್ಯೆಗಳಂತೆ ರಂಗಭೂಮಿ ಕ್ಷೇತ್ರಕ್ಕೂ ಸಂಕಷ್ಟ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿಗೂ, ನಾಟಕಕ್ಕೂ ಅವಿನಾಭಾವ ಸಂಬಂಧವಿದ್ದು, ಬಳ್ಳಾರಿ ರಾಘವರಂತ ಕಲಾವಿದರೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಚಳುವಳಿಗಳ ಸಂಘಟನೆಗೆ ನಾಟಕಗಳು ಮಾಧ್ಯಮವಾಗಿದ್ದವು. ಇಂದಿನ ಪೀಳಿಗೆಯು ಮೊಬೈಲ್, ಟಿವಿ ಗೀಳಿನಿಂದಾಗಿ ಕಲ್ಪನಾಶಕ್ತಿಯೇ ಇಲ್ಲಂದಂತಾಗಿದೆ. ಹೊಸ ಚಿಂತನೆಗಳಿಗೆ ಈ ಶಿಬಿರವು ನಾಂದಿ ಹಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ವಿವಿಧ ರಿಯಾಲಿಟಿ ಶೋಗಳ ಮೂಲಕ ನಾಡಿನ ಅನೇಕ ಪ್ರತಿಭೆಗಳನ್ನು ಟಿ.ವಿ ಚಾನೆಲ್ಗಳು ಹೊರತಂದಿವೆ. ನಾಟಕ ರೂಪಿಸುವ ಸಂಪೂರ್ಣ ಜವಾಬ್ದಾರಿ ಒಬ್ಬ ನಿರ್ದೇಶಕನ ಮೇಲಿರುತ್ತದೆ. ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗಕ್ಕೆ ಧನಸಹಾಯ ಮಾಡಿರುವ ದಿ. ರಮಣಿಕ ಗುಪ್ತ ಅವರ ಹೆಸರಲ್ಲಿ ಚಿನ್ನದ ಪದಕ ನೀಡುವಲ್ಲಿ ಚಿಂತನೆ ನಡೆಸಬೇಕು ಎಂದು ವಿಭಾಗದ ಮುಖ್ಯಸ್ಥರಿಗೆ ತಿಳಿಸಿದರು.

ಇದೇ ವೇಳೆ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ನಿರ್ಮಿಸಲು ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥ ಪ್ರೊ.ಶಾಂತಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ವಿವಿಯ ಕುಲಸಚಿವ ಪ್ರೊ.ವಿ.ಲೋಕೇಶ್, ಕಲಾ ನಿಕಾಯದ ಡೀನ್ ಪ್ರೊ.ರಾಬರ್ಟ್ ಜೋಸ್ ವೇದಿಕೆಯಲ್ಲಿದ್ದರು. ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ನಿರೂಪಿಸಿದರು. ಡಾ.ಶಿವಪ್ರಸಾದ್ ವಂದಿಸಿದರು.

ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರಗಳು 10 ದಿನಗಳ ಕಾಲ ನಡೆಯಲಿದ್ದು, 250ಕ್ಕೂ ಅಧಿಕ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ನೋಂದಣಿ ಮಾಡಿಕೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada