ಬೆಂಗಳೂರು, 05 ಆಗಸ್ಟ್ (ಹಿ.ಸ.):
ಆಯಂಕರ್:
ರಾಜ್ಯ ಸರ್ಕಾರ ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿದ್ದು, ಅರ್ಚಕರು ತಮ್ಮ ಮನೆ ಮತ್ತು ದೇವಾಲಯಗಳನ್ನು ಕಾಪಾಡಿದಂತೆ ಸರ್ಕಾರವನ್ನೂ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ನೌಕರರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ದೇವಾಲಯಗಳ ಅಭಿವೃದ್ಧಿ, ಅರ್ಚಕರ ಕಲ್ಯಾಣ ಹಾಗೂ ಮುಜರಾಯಿ ಇಲಾಖೆಯ ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ಪರೋಕ್ಷವಾಗಿ ಟೀಕಿಸಿದ ಸಿಎಂ, ಧರ್ಮವನ್ನು ಗುತ್ತಿಗೆ ಪಡೆದವರು ಅರ್ಚಕರ ಬದುಕಿನಲ್ಲಿ ಯಾವ ಬದಲಾವಣೆ ತಂದಿದ್ದಾರೆ? ಎಂದು ಪ್ರಶ್ನಿಸಿದರು. ದೊಡ್ಡ ದೇವಾಲಯಗಳ ಹುಂಡಿ ಹಾಗೂ ಹಣ ಎಣಿಕೆ ಸ್ಥಳಗಳಲ್ಲಿ ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಸುಮಾರು 34 ಸಾವಿರ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಮೂರು ತಿಂಗಳ ತರಬೇತಿ ನೀಡುವ ಯೋಜನೆಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ಅರ್ಚಕರ ಬೇಡಿಕೆಯಂತೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡುವ ವಿಚಾರವನ್ನು ಅವರೊಂದಿಗೆ ಚರ್ಚಿಸಲು ಸಿದ್ಧವಿದ್ದೇನೆ ಎಂದು ಹೇಳಿದರು.
ಈ ವೇಳೆ ಪಂಚ ಗ್ಯಾರಂಟಿ ಯೋಜನೆಗಳು, ಉಚಿತ ವಿದ್ಯುತ್, ಗೃಹಲಕ್ಷ್ಮಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಸಿಎಂ ತಿಳಿಸಿದರು. ಸರ್ಕಾರ ಜನಸೇವೆಗೆ ಬದ್ಧವಾಗಿದ್ದು, ಅರ್ಚಕರ ಆಶೀರ್ವಾದ ಸದಾ ಇರಲಿ ಎಂದು ಅವರು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.

