ಬೆಂಗಳೂರು, 25 ಮೇ (ಹಿ.ಸ.) :
ಆಯಂಕರ್ : ಆರ್ಥಿಕವಾಗಿ ಸಬಲರಾಗಲು ಯುವಕರು ಉದ್ಯಮಶೀಲತೆಯನ್ನು ಬೆಳೆಸಿಕೊಂಡು, ತಮ್ಮದೇ ಉದ್ಯಮಗಳನ್ನು ಸ್ಥಾಪಿಸಿ, ಬೆಳೆಸಬೇಕು, ಮತ್ತೊಬ್ಬರಿಗೆ ಕೆಲಸಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್. ಎಂ. ರೇವಣ್ಣ ಅವರು ತಿಳಿಸಿದರು.
ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ ಕನಕದಾಸ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕನಕೋದ್ಯಮಿಗಳ ಸಮ್ಮಿಲನ ಮತ್ತು ಉದ್ಯಮಿಗಳಿಗೆ ಅವಕಾಶಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ನಮ್ಮ ಸಮುದಾಯದ ಉದ್ಯಮಿಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದವು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಮಾಡುವ ನಿವೇಶನಗಳಲ್ಲಿ ಕುರುಬ ಸಮುದಾಯಕ್ಕೆ ಕೆಲ ನಿವೇಶನಗಳನ್ನು ಮೀಸಲಿಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದಸಮುದಾಯದಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಾಲುಮತ ಉದ್ಯಮಿಗಳ ಸಂಘದ ಅಧ್ಯಕ್ಷರಾದ ಸುನೀಲ್ ಜಯರಾಜ್ ಅವರು ಮಾತನಾಡಿ, ಸಮುದಾಯದ ಸಬಲೀಕರಣ ಮತ್ತು ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಈ ಸಂಘಟನೆ ಮಾಡಲಾಗಿದೆ. ಉದ್ಯಮ ಸ್ಥಾಪಿಸುವಾಗ ಹಲವಾರು ಸವಾಲುಗಳು ಬರುತ್ತವೆ. ಜಾಗೃತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯ ನವ ಉದ್ಯಮಿಗಳಿಗೆ ಮಾರ್ಗದರ್ಶನ ಹಾಗೂ ನೆಟ್ವರ್ಕಿಂಗ್ ಕೆಲಸವನ್ನು ಹಾಲುಮತ ಉದ್ಯಮಿಗಳ ಸಂಘ ಮಾಡಲಿದೆ ಎಂದು ಹೇಳಿದರು.
ಸಮುದಾಯದ ಯುವಕರಿಗೆ ಗ್ಯಾರಂಟಿಗಳಿಗಿಂತ ಮುಖ್ಯವಾಗಿ ಉದ್ಯೋಗ ಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು ಎಂದು
ಮಾಜಿ ಸಚಿವ ಹಾಗೂ ಶಾಸಕರಾದ ಬಂಡೆಪ್ಪ ಕಾಶಂಪೂರ್ ಅವರು ಹೇಳಿದರು.
ರಾಮಕೃಷ್ಣ ಯೋಗಾಶ್ರಮದ ಶ್ರೀ ಯೋಗೇಶ್ವರಾನಂದ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿ, ಮಾಜಿ ಶಾಸಕ ಡಾ. ಎಂ.ಆರ್. ಹುಲಿನಾಯ್ಕರ್, ಇನ್ಸೈಟ್ ಐ.ಎ.ಎಸ್. ಅಕಾಡೆಮಿಯ ಬಿಜಿ ವಿನಯ್ ಕುಮಾರ್, ಕನಕಶ್ರೀ ಟ್ರಸ್ಟ್ ಅಧ್ಯಕ್ಷರಾದ ಟಿ ಬಿ ಬಳಗಾವಿ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಪೀಣ್ಯ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಆರ್. ಶಿವಕುಮಾರ್, ಹಾಲುಮತ ಉದ್ಯಮಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ರಾಮಯ್ಯ, ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.

