ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷದ ನಡೆ ಭಾರೀ ಸದ್ದು ಮಾಡುತ್ತಿದ್ದು, ರಾಜ್ಯಸಭಾ ಉಪ ನಾಯಕ ಸ್ಥಾನದಿಂದ ಕೆಳಗಿಸಿದ ಪಕ್ಷದ ವಿರುದ್ಧ ಸಂಸದ ರಾಘವ್ ಚಡ್ಡಾ ಗುಡುಗಿದ್ದು, ಇದರ ಬೆನ್ನಲ್ಲೇ ಸಂಘರ್ಷ ತಾರಕಕ್ಕೇರಿದೆ.
ರಾಘವ್ ಚಡ್ಡಾ ವಿಡಿಯೋ ಸಂದೇಶ ಮೂಲಕ ಪಕ್ಷದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದು, ಇದಕ್ಕೆ ತಿರುಗೇಟು ನೀಡಿದ ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಂಡಾ,
ಛಡ್ಡಾ, ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ಅವರಿಗೆ ದೇಶದ ನಿಜವಾದ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಭಯವಿದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಸಿಗುವ ಸೀಮಿತ ಸಮಯದಲ್ಲಿ ದೇಶದ ಗಂಭೀರ ಸಮಸ್ಯೆಗಳನ್ನು ಎತ್ತುವ ಬದಲು ವಿಮಾನ ನಿಲ್ದಾಣಗಳಲ್ಲಿ ಸಿಗುವ ಕಡಿಮೆ ಬೆಲೆಯ ಸಮೋಸಾಗಳ ಕುರಿತಾ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಹೋರಾಟ ನಿಂತಿಲ್ಲ: ರಾಜ್ಯಸಭಾ ಉಪನಾಯಕ ಹುದ್ದೆ ಕಳೆದುಕೊಂಡ ರಾಘವ್ ಚಡ್ಡಾ ಫಸ್ಟ್ ರಿಯಾಕ್ಷನ್
ನಾವೆಲ್ಲರೂ ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು , ನಮ್ಮ ಗುರುತೇ ನಿರ್ಭಯತೆ, ಹೀಗಿರುವಾಗ ಯಾರಾದರೂ ಮೋದಿ ವಿರುದ್ಧ ಮಾತನಾಡಲು ಭಯ ಪಟ್ಟರೆ ದೇಶಕ್ಕಾಗಿ ಹೋರಾಡಲು ಸಾಧ್ಯವೇ ಎಂದು ಟೀಕಿಸಿದರು.
ಆಪ್ ಕಾರ್ಯಕರ್ತರನ್ನು ಬಂಧಿಸುವಾಗ ಆಗಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಿರ್ಣಯ ತರುವ ವೇಳೆಯೂ ಸಹಿ ಹಾಕಲು ನಿರಾಕರಿಸಿದ್ದೀರಿ. ಅಷ್ಟೇ ಅಲ್ಲದೆ, ಆಪ್ ಸಂಸದರನ್ನು ಸದನದಿಂದ ಹೊರಹಾಕುವಾಗಲೂ ತಮ್ಮ ಆಸನದಲ್ಲೇ ಕುಳಿತಿದ್ದರು ಎಂದು ಆರೋಪಿಸಿದರು.

