ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ರಾಜ್ಯದಾದ್ಯಂತ ಇಂದು ( ಜುಲೈ 8 ) ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದಾರೆ. ಬೆಂಗಳೂರು, ಚಿತ್ರದುರ್ಗ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ, ಅಪಾರ ಪ್ರಮಾಣದ ಅಕ್ರಮ ಸಂಪತ್ತು ಹೊಂದಿದ್ದ ಹತ್ತು ಮಂದಿ ಸರ್ಕಾರಿ ಅಧಿಕಾರಿಗಳ ಬಂಡವಾಳ ಬಯಲಾಗಿದೆ.
ಅಧಿಕಾರಿಗಳ ನಿವಾಸ, ಕಚೇರಿಗಳು, ಫಾರ್ಮ್ಹೌಸ್ಗಳು ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದಾಗ ನಗದು, ಚಿನ್ನಾಭರಣಗಳು, ವಿದೇಶಿ ಕರೆನ್ಸಿ ಮತ್ತು ಸ್ಥಿರಾಸ್ತಿಗಳ ದಾಖಲೆಗಳು ಪತ್ತೆಯಾಗಿವೆ.
ರಾಯಚೂರಿನಲ್ಲಿ ಬಸನಗೌಡ ಅವರ ನಿವಾಸ, ಕಚೇರಿ, ಪೆಟ್ರೋಲ್ ಬಂಕ್, ಗೋದಾಮು ಹಾಗೂ ಸಹೋದರರ ಒಡೆತನದ ‘ಸೆಲೆಬ್ರಿಟಿ ಗಾರ್ಡನ್’ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಬರುತ್ತಿದ್ದಂತೆಯೇ ಓರ್ವ ಅಧಿಕಾರಿ ಮಹಡಿಯಿಂದ ಓಡಿಹೋದ ಘಟನೆಯೂ ನಡೆದಿದೆ.
ಕಲಬುರಗಿಯಲ್ಲಿ 7ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದ್ದು, 20 ಎಕರೆಗೂ ಹೆಚ್ಚು ಕೃಷಿ ಭೂಮಿ, ಪ್ಲಾಟಿನಂ ಸ್ಟುಡಿಯೋ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯ ಮಾಹಿತಿ ಬೆಳಕಿಗೆ ಬಂದಿದೆ.
ಬೆಂಗಳೂರು ದಕ್ಷಿಣ ಎಸ್ಪಿ ಸ್ನೇಹ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಡಬ್ಲ್ಯೂಡಿ ಮತ್ತು ಕೆಆರ್ಐಡಿಎಲ್ ಅಧಿಕಾರಿಗಳ ಅಕ್ರಮ ಆಸ್ತಿಗಳ ಮೌಲ್ಯಮಾಪನ ಮಾಡಲಾಗುತ್ತಿದೆ.
ಸದ್ಯ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆಯ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ.
ಚಿತ್ರದುರ್ಗ, ತುಮಕೂರು ಮತ್ತು ಶಿವಮೊಗ್ಗದಲ್ಲೂ ಸಹ ಅಧಿಕಾರಿಗಳ ಬ್ಯಾಂಕ್ ದಾಖಲೆಗಳು, ಕೈಗಾರಿಕಾ ಘಟಕಗಳು ಮತ್ತು ಅಗಾಧ ಪ್ರಮಾಣದ ಕೃಷಿ ಜಮೀನುಗಳ ದಾಖಲೆಗಳನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದಾರೆ.
1 ಬಸನಗೌಡ ಪಾಟೀಲ್ – ಕಾರ್ಯಕಾರಿ ಇಂಜಿನಿಯರ್, ಕೃಷ್ಣ ಭಾಗ್ಯ ಜಲ ನಿಗಮ ರಾಯಚೂರು
2 ನರೇಂದ್ರಕುಮಾರ್-ರ್ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಬೆಂಗಳೂರು
3 ಪ್ರವೀಣ್ ಬಿ. ಶ್ರೀಹರಿ-ಸೂಪರಿಡೆಂಡೆಂಟ್ ಇಂಜಿನಿಯರ್, ಕೆಆರ್ಐಡಿಎಲ್ (ಬೆಂಗಳೂರು ವಲಯ)ಬೆಂಗಳೂರು
4 ಬಿ.ಎಚ್. ದುಗ್ಗಪ್ಪ-ವಲಯ ಅರಣ್ಯ ಸಂರಕ್ಷಣಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ ಚಿತ್ರದುರ್ಗ
5 ಎಂ. ಶಂಕರ್ – ರ್ಸಹಾಯಕ ಉಪನ್ಯಾಸಕ, ಕೃಷಿ ಮತ್ತು ತೋಟಗಾರಿಕಾ ವಿವಿ ಚಿತ್ರದುರ್ಗ
6ಎನ್. ಮಧುಸೂದನ್ – ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ ತುಮಕೂರು
7ತಿಮ್ಮೇಗೌಡ (ತಿಮಯ್ಯ)ಪಿಡಿಒ- ಕುಂಬಳಗೋಡು ಬೆಂಗಳೂರು ದಕ್ಷಿಣ
8ಕಿರಣ್ ಅಂಗಡಿ-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ
9ಅಮೃತರಾವ್ ಯಲಾಲ್- ಸಹಾಯಕ ಕಾರ್ಯಪಾಲಕ ಅಭಿಯಂತರ, ಜೆಸ್ಕಾಂ ಕಲಬುರಗಿ
10ಡಿ.ಆರ್. ಪುಷ್ಪ-ಉಪನಿರ್ದೇಶಕರು (ಆಡಳಿತ), ಎಪಿಎಂಸಿ ಬೆಂಗಳೂರು

