ಭೋಪಾಲ್: ಅಯೋಧ್ಯೆಯ ರಾಮ ಮಂದಿರದ ದೇಣಿ, ಕಾಣಿಕೆ ಕಳ್ಳತನ ಪ್ರಕರಣದ ಬೆನ್ನಲ್ಲೇ ಬದರಿನಾಥ ದೇವಾಲಯದಲ್ಲಿಯೂ ಕಾಣಿಕೆ ಕಳ್ಳತನ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಮಧ್ಯಪ್ರದೇಶದ ನಾಗ್ಪುರದ ಪೀತಾಂಬರ ಪೀಠದ ಅಡಿಯಲ್ಲಿ ಬರುವ ಪ್ರಸಿದ್ಧ ಮಾ ಬಾಗಲಾಮುಖಿ ದೇವಸ್ಥಾನದಲ್ಲಿಯೂ ದೇಣಿಗೆ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಬಾಗಲಾಮುಖಿ ದೇವಸ್ಥಾನಕ್ಕೆ ನೀಡಲಾದ ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಬರುವ ಭಾರಿ ಪ್ರಮಾಣದ ದೇಣಿಗೆ ಮತ್ತು ಆಸ್ತಿಯ ಉಸ್ತುವಾರಿಗೆ ಸಂಬಂಧಿಸಿದಂತೆ ಟ್ರಸ್ಟಿಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದೆ. ಹಣಕಾಸಿನ ಪಾರದರ್ಶಕತೆಯ ಕೊರತೆ ಮತ್ತು ನಿಧಿಯ ದುರುಪಯೋಗ ನಡೆದಿದೆ ಎಂಬ ವಿವಾಅದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಈ ಪ್ರಕರಣದ ತನಿಖೆಗಾಗಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗರ್ ಮಾಲ್ವಾ ಜಿಲ್ಲಾಧಿಕಾರಿ ಪ್ರೀತಿ ಯಾದವ್ ಹೊರಡಿಸಿರುವ ಆದೇಶದ ಪ್ರಕಾರ, ಬಾಗಲಾಮುಖಿ ದೇವಸ್ಥಾನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಮಿತಿಯೊಂದು ಸರ್ಕಾರಿ ಸ್ವಾಮ್ಯದ ಅಧಿಕೃತ ದೇವಸ್ಥಾನ ನಿರ್ವಹಣಾ ಸಮಿತಿಯ ಬದಲು ಭಕ್ತರಿಂದ ನಗದು ಹಣ, ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳನ್ನು ಸಂಗ್ರಹಿಸುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಲಾಗಿದೆ.
ಈ ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆಯನ್ನು ನಿರ್ವಹಿಸಲು ಖಾಸಗಿ ಸಮಿತಿಯು ತನ್ನದೇ ಆದ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದು, ದೇವಸ್ಥಾನದ ನಿಧಿಯ ದುರುಪಯೋಗ ಮಾಡಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಸತ್ಯವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಎಸ್. ಸೋಲಂಕಿ ನೇತೃತ್ವದಲ್ಲಿ 3 ಸದಸ್ಯರ ತನಿಖಾ ಸಮಿತಿಯನ್ನು ನೇಮಿಸಿದೆ.
ಜಿಲ್ಲಾ ಖಜಾನೆ ಅಧಿಕಾರಿ ಮನೀಶ್ ಸೋಲಂಕಿ ಮತ್ತು ನಲ್ಖೇಡಾ ನಗರ ಪರಿಷತ್ತಿನ ಮುಖ್ಯ ಮುನ್ಸಿಪಲ್ ಅಧಿಕಾರಿ ಮಿನ್ನಿ ಅಗರ್ವಾಲ್ ಅವರನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ತನಿಖೆಯ ಭಾಗವಾಗಿ ಸಮಿತಿಯು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಈ ಅಕ್ರಮದಲ್ಲಿ ದೇವಸ್ಥಾನದ ಯಾವುದಾದರೂ ಅಧಿಕಾರಿ, ಉದ್ಯೋಗಿ, ನಿರ್ವಹಣಾ ಸಮಿತಿಯ ಪ್ರತಿನಿಧಿಯ ಪಾತ್ರವಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

