ಧಾರವಾಡ: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾಗಿದ್ದ ಶಾಸಕ ವಿನಯ್ ಕುಲಕರ್ಣಿಗೆ ನ್ಯಾಯಾಲಯ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ವಿನಯ್ ಕುಲಕರ್ಣಿ, ತಮ್ಮ ಸ್ವಕ್ಷೇತ್ರ ಹಾಗೂ ಸ್ವಜಿಲ್ಲೆಯಾದ ಧಾರವಾಡಕ್ಕೆ ಭೇಟಿ ನೀಡಿದ್ದಾರೆ.
ಕೋರ್ಟ್ನಿಂದ ಜಿಲ್ಲಾ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ, ತಮ್ಮ ಬೆಂಬಲಿಗರು, ಪತ್ನಿ ಮಕ್ಕಳೊಂದಿಗೆ ಧಾರವಾಡದ ಶಿವಗಿರಿ ಬಡಾವಣೆಯಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ.
ಮನೆಗೆ ಬಂದ ನಾಯಕನನ್ನು ಬೆಂಬಲಿಗರು ಆರತಿ ಬೆಳಗಿ, ಮನೆ ಬಾಗಿಲಿಗೆ ಕುಂಬಳಕಾಯಿ ಒಡೆದು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದ್ದಾರೆ. ಧಾರವಾಡಕ್ಕೆ ಆಗಮಿಸುವ ಮಾರ್ಗಮಧ್ಯೆ, ತಮ್ಮ ಮಕ್ಕಳಾದ ಹೇಮಂತ್ ಹಾಗೂ ವೈಶಾಲಿ ಜೊತೆ ಹಾರೋಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿನಯ್ ಕುಲಕರ್ಣಿ, ಬಳಿಕ ಶ್ರೀ ಮುರುಘಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
2016ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, 2020ರ ನವೆಂಬರ್ 5 ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಸುಮಾರು 9 ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅವರಿಗೆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತಿನ ಮೇಲೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ತದೆ ನೀಡಿತ್ತು. ಇತ್ತೀಚೆಗೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಆದೇಶ ಹಾಗೂ 42ನೇ ಜೆಎಮ್ಎಫ್ಸಿ ಕೋರ್ಟ್ ನೀಡಿದ ಅನುಮತಿಯಿಂದಾಗಿ, ಕಳೆದ 6 ವರ್ಷಗಳಿಂದ ಸ್ವಂತ ಜಿಲ್ಲೆಯಿಂದ ದೂರವಿದ್ದ ವಿನಯ್ ಕುಲಕರ್ಣಿಗೆ ಕೊನೆಗೂ ತವರು ಜಿಲ್ಲೆ ಧಾರವಾಡಕ್ಕೆ ಭೇಟಿ ನೀಡಲು ಅನುಮತಿ ಸಿಕ್ಕಿದೆ.

