ಕೋಲಾರ: ದುರಂತೋ ಎಕ್ಸ್ ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ತಕ್ಷಣ ಅಲರ್ಟ್ ಆದ ರೈಲ್ವೆ ಪೊಲೀಸರು ರೈಲು ನಿಲ್ಲುಸಿ ಪರಿಶೀಲನೆ ನಡೆಸಿದ್ದಾರೆ.
ಕೋಲ್ಕತ್ತಾದ ಹೌರಾ ಜಂಕ್ಷನ್ನಿಂದ ಬೆಂಗಳೂರಿನ ಎಸ್ಎಂವಿಟಿಗೆ ಆಗಮಿಸುತ್ತಿದ್ದ ದುರಂತೋ ಎಕ್ಸ್ಪ್ರೆಸ್ ರೈಲಿಗೆ ಕಿಡಿಗೇಡಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ.
ತಕ್ಷಣ ಎಚ್ಚೆತ್ತ ರೈಲ್ವೆ ಪೊಲೀಸರು ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ಜಂಕ್ಷನ್ನಲ್ಲಿ ರೈಲು ನಿಲ್ಲಿಸಿ ಪರಿಶೀಲನೆ ಮಾಡಿದರು.
ಈ ವೇಳೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ಬಂಗಾರಪೇಟೆ ಪ್ಲಾಟ್ಫಾರ್ಮ್ ನಂ.1ರಲ್ಲಿ ತಪಾಸಣೆ ಮಾಡಿದರು.
ಇನ್ನು ದುರಂತೋ ಎಕ್ಸ್ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಓರ್ವ ಯುವಕನನ್ನು ಜಿಲ್ಲೆಯ ಬಂಗಾರಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತ ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಡೌಲಾ ಎಂದು ಗುರುತಿಸಲಾಗಿದೆ. ಈತ ದುರಂತೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ. ರೈಲಿನಲ್ಲಿ ಶಶಾಂಕ್ ಹಾಗೂ ಪ್ರಯಾಣಿಕ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಪ್ರಯಾಣಿಕ ಶಶಾಂಕ್ ಮೊಬೈಲ್ ಕಿತ್ತುಕೊಂಡು ರೈಲಿನಲ್ಲಿ ಬಾಂಬ್ ಇಟ್ಟಿದ್ದಾನೆಂದು ಕರೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಯಾಣಿಕನನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಸದ್ಯ ರೈಲಿನಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ

