ಮೈಸೂರು: ರಾಜ್ಯದಲ್ಲಿ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿರುವ ಪ್ರಕರಣ ಮುಂದುವರೆದಿದೆ. ಮೈಸೂರು ಜಿಲ್ಲಾ ನ್ಯಾಯಾಲಯ ಹಾಗೂ ಚಿಕ್ಕಮಗಳೂರು ಕೋರ್ಟ್ ಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ.
ಮೈಸೂರು ಜಿಲ್ಲಾ ನ್ಯಾಯಲಯಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ.
ನ್ಯಾಯಾಲಕ್ಕೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ಕೋರ್ಟ್ ನಲ್ಲಿ ಬಾಂಬ್ ಇಡಲಾಗಿದ್ದು, ಸ್ಫೋಟಗೊಳ್ಳಲಿದೆ ಎಂದು ಸಂದೇಶ ರವಾನಿಸಲಾಗಿದೆ.
ವಿಷಯ ತಿಳಿಯುತ್ತಿದಂತೆ ನ್ಯಾಯಾಲಯಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ವಕೀಲರು, ಕೋರ್ಟ್ ಸಿಬ್ಬಂದಿಗಳನ್ನು ಹೊರ ಕಳುಹಿಸಿ ಕೋರ್ಟ್ ನಲ್ಲಿ ಇಂಚಿಂಚೂ ತಪಾಸಣೆ ನಡೆಸಲಾಗುತ್ತಿದೆ.
ಮೈಸೂರಿನ ಚಾಮರಾಜಪುರಂನಲ್ಲಿ ಇರುವ ಇದೇ ನ್ಯಾಯಾಲಯದಲ್ಲಿ 8 ವರ್ಷದ ಹಿಂದೆ ಶೌಚಾಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಇದೀಗ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಇನ್ನು ಚಿಕ್ಕಮಗಳೂರು ಕೋರ್ಟ್ ಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಮಧ್ಯಾಹ್ನ 1.30ರಿಂದ 3ರೊಳಗೆ ಬಾಂಬ್ ಸ್ಫೋಟಿಸೋದಾಗಿ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ ಬಂದಿದೆ.
ದಿ ಗರ್ಲ್ ಹೂ ಕ್ರೈಡ್ ವುಲ್ಫ್ ಹೆಸರಿನ ಇ-ಮೇಲ್ನಲ್ಲಿ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದ್ದು, 13 ವಿಷಯುಕ್ತ ಅನಿಲ, RDX ಬಾಂಬ್ಗಳು ಸ್ಫೋಟಗೊಳ್ಳಲಿವೆ. ಮಧ್ಯಾಹ್ನದೊಳಗೆ ಕೋರ್ಟ್ನಲ್ಲಿರುವ ನ್ಯಾಯಾಧೀಶರು, ಜನರನ್ನು ಸ್ಥಳಾಂತರಿಸಿ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆ ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಭೇಟಿ ನೀಡಿದ್ದು, ಶ್ವಾನದಳ, ಬಾಂಬ್ ಪತ್ತೆ ದಳ, ಬಾಂಬ್ ನಿಷ್ರಿಯ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಕೋರ್ಟ್ ಸುತ್ತಮುತ್ತ ನಿಗಾವಹಿಸಲಾಗಿದೆ.

