ಬೆಂಗಳೂರು: ಒಂದು ವರ್ಗದ ನಾಯಕರಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಲಿಲ್ಲ, ಬದಲಿಗೆ ಎಲ್ಲಾ ಶೋಷಿತ ವರ್ಗಗಳಿಗೂ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ ಅವರಾಗಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅನಾವರಣಗೊಳಿಸಿ ಮಾತನಾಡಿದರು.
ಜನರ ಪರವಾಗಿ ದನಿ ಎತ್ತುವುದನ್ನು ಅಂಬೇಡ್ಕರ್ ಅವರು ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾಬಾಯಿಯವರು ಕೇವಲ ಒಂದು ಮಗುವಿಗೆ ಜನ್ಮ ನೀಡಲಿಲ್ಲ; ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಮಹಾಶಕ್ತಿಗೆ ಜನ್ಮ ಕೊಟ್ಟರು ಎಂದರು.
ಮಹಾತ್ಮ ಗಾಂಧೀಜಿಯವರ ಪುತ್ಥಳಿಯ ಜೊತೆಯಲ್ಲೇ ಇವತ್ತು ಬಾಬಾಸಾಹೇಬರ ಪುತ್ಥಳಿಯೂ ಈ ದೇಶದ ಉದ್ದಗಲಕ್ಕೂ ಇರುವುದನ್ನು ನಾವು ಗಮನಿಸಬಹುದು. ನಾನು ಪ್ರತಿ ಬಾರಿಯೂ ಹೇಳುತ್ತೇನೆ, ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಸಮಾನತೆಯನ್ನು ಕೊಟ್ಟಂತಹ ನಾಯಕರು ಅವರು. ಎಲ್ಲಾ ವರ್ಗಗಳಿಗೂ ನಾಯಕರಾಗಿ ಬೆಳಕು ತಂದವರು ಎಂದು ಹೇಳಿದರು.
ಇಲ್ಲಿನ ಬುದ್ಧನ ಇತಿಹಾಸದ ಹಿನ್ನೆಲೆಯಲ್ಲಿ ರಾಜಘಟ್ಟವನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಅಧ್ಯಯನ ಸಮಿತಿ ರಚಿಸಲು ಚಿಂತಿಸಲಾಗುವುದು. ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಅಮೂಲ್ಯವಾದ, ಸಾವಿರಾರು ವರ್ಷಗಳ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇವುಗಳ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡಗಳನ್ನು ರಚಿಸಿ, ಈ ಭಾಗದಲ್ಲಿನ ಬೌದ್ಧ ಸಂಸ್ಕೃತಿ ಮತ್ತು ಆ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಶಾಸಕರಾದ ಶರತ್ ಬಚ್ಚೇಗೌಡ, ಆನೇಕಲ್ ಶಿವಣ್ಣ, ಎನ್. ಶ್ರೀನಿವಾಸ್, ಧೀರಜ್ ಮುನಿರಾಜು, ಶ್ರೀನಿವಾಸ್, ಸಂಸದರಾದ ಡಾ. ಕೆ. ಸುಧಾಕರ್, ಎಂಎಲ್ಸಿ ರವಿ ಮತ್ತಿತರರು ಉಪಸ್ಥಿತರಿದ್ದರು.

