Dailyhunt
PM KISAN 23ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ : ರೈತರೇ, ಈ ಕೆಲಸ ಮಾಡದಿದ್ರೆ ಅಕೌಂಟ್‌ಗೆ ಹಣ ಬರಲ್ಲ!

PM KISAN 23ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ : ರೈತರೇ, ಈ ಕೆಲಸ ಮಾಡದಿದ್ರೆ ಅಕೌಂಟ್‌ಗೆ ಹಣ ಬರಲ್ಲ!

ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ಎಚ್ಚರಿಕೆ ನೀಡಿದೆ. ಯೋಜನೆಯ ಲಾಭ ಪಡೆಯಲು ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರವು 23ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಪ್ರಧಾನಿ ಮೋದಿ ಅವರು ಬಟನ್ ಒತ್ತುವ ಮೂಲಕ ಹಣ ಬಿಡುಗಡೆ ಮಾಡಲಿದ್ದಾರೆ.

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ಮಾರ್ಚ್ 13 ರಂದು ಗುವಾಹಟಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು ನೇರವಾಗಿ ಈ ಹಣವನ್ನು ಬಿಡುಗಡೆ ಮಾಡಿದ್ದರು. ಫೆಬ್ರವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಹಣವು ಕೆಲವು ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ರೈತರು 23ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಹಣ ಯಾವಾಗ ಬಿಡುಗಡೆ?

23ನೇ ಕಂತಿನ ಹಣದ ಕುರಿತು ಅಂತಿಮವಾಗಿ ಸ್ಪಷ್ಟನೆ ಸಿಕ್ಕಿದ್ದು, ಜೂನ್ ಅಥವಾ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಒಂದು ಪ್ರಮುಖ ಸೂಚನೆ ನೀಡಿದೆ.

ಈ ಕೆಲಸ ಮಾಡದಿದ್ದರೆ ಹಣ ಬರಲ್ಲ!

ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆಯಲು ಫಲಾನುಭವಿಗಳು ಕಾಲಕಾಲಕ್ಕೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ 23ನೇ ಕಂತಿನ ಹಣವು ಡಿಬಿಟಿ (DBT) ಮೂಲಕ ನೇರವಾಗಿ ಖಾತೆಗೆ ಜಮೆಯಾಗಲಿರುವುದರಿಂದ, ಫಲಾನುಭವಿಗಳೆಲ್ಲರೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದರೊಂದಿಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಇ-ಕೆವೈಸಿ ಮಾಡಲು ಮೂರು ಸುಲಭ ಮಾರ್ಗಗಳಿವೆ:

  1. ಪಿಎಂ ಕಿಸಾನ್ ವೆಬ್‌ಸೈಟ್: ನೀವೇ ಸ್ವತಃ ವೆಬ್‌ಸೈಟ್ ಮೂಲಕ ಮಾಡಬಹುದು.
  2. ಪಿಎಂ ಕಿಸಾನ್ ಆಪ್: ಮೊಬೈಲ್ ಆಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.
  3. ಸಿಎಸ್‌ಸಿ ಕೇಂದ್ರಗಳು: ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ (Common Service Centres) ಭೇಟಿ ನೀಡಿ ಕೆವೈಸಿ ಮಾಡಿಸಬಹುದು.

ಯಾರಿಗೆ ಹಣ ಸಿಗುವುದಿಲ್ಲ?

ಫೆಬ್ರವರಿ 1, 2019ರ ನಂತರ ಭೂಮಿ ಖರೀದಿಸಿದವರಿಗೆ ಪಿಎಂ ಕಿಸಾನ್ ಹಣ ಸಿಗುವುದಿಲ್ಲ. ಅಲ್ಲದೆ, ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯುತ್ತದೆ. ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಮರುಪರಿಶೀಲನೆ (Re-verification) ನಡೆಸುತ್ತಿದ್ದು, ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುತ್ತಿದೆ.

ಆದಾಯ ತೆರಿಗೆ ಪಾವತಿಸುವವರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿರುವುದು ಕಂಡುಬಂದಿದ್ದು, ಐಟಿ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಅಂತಹವರ ಹೆಸರನ್ನು ಕೇಂದ್ರ ಸರ್ಕಾರವು ಯೋಜನೆಯಿಂದ ಕೈಬಿಡುತ್ತಿದೆ. ಇದರಿಂದಾಗಿ ಫಲಾನುಭವಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. 2025-26ರ ಅಂಕಿಅಂಶಗಳ ಪ್ರಕಾರ, ಫಲಾನುಭವಿಗಳ ಸಂಖ್ಯೆ ಸುಮಾರು 9.46 ಕೋಟಿಯಷ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia