ಚಲಿಸುವ ರೈಲಿನ ಹವಾನಿಯಂತ್ರಿತ (ಎಸಿ) ಬೋಗಿಯಲ್ಲಿ ಪ್ರಯಾಣಿಕನೊಬ್ಬ ಸಿಗರೇಟ್ ಹಚ್ಚಿದ ಪರಿಣಾಮವಾಗಿ ಬೆಂಕಿಯ ಅಪಾಯದ ಮುನ್ನೆಚ್ಚರಿಕೆ ಅಲಾರಾಂ ಮೊಳಗಿ, ತಕ್ಷಣವೇ ಆಟೋಮ್ಯಾಟಿಕ್ ಬ್ರೇಕ್ ಬಿದ್ದು ರೈಲು ನಿಂತ ಘಟನೆ ನಡೆದಿದೆ. ಸಿಗರೇಟ್ ಹೊಗೆಯಿಂದಾಗಿ ರೈಲಿನಲ್ಲಿದ್ದ ತುರ್ತು ಸುರಕ್ಷತಾ ವ್ಯವಸ್ಥೆ ತಕ್ಷಣವೇ ಸಕ್ರಿಯಗೊಂಡಿದ್ದು, ಈ ಘಟನೆಯಿಂದ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆಯಾದರೂ, ಭಾರತೀಯ ರೈಲ್ವೆಯ ಆಧುನಿಕ ಸುರಕ್ಷತಾ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸುಶಾಂತ್ ಸಿಂಗ್ ಎಂಬ ಪ್ರಯಾಣಿಕರು ಈ ಸಂಪೂರ್ಣ ಘಟನೆಯನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣವೇ ಅಪಾಯದ ಸೈರನ್ ಮೊಳಗಲು ಪ್ರಾರಂಭಿಸಿತು. ಇದರೊಂದಿಗೆ “ಈ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ, ಬ್ರೇಕ್ ಹಾಕಲಾಗಿದೆ. ದಯವಿಟ್ಟು ಸುರಕ್ಷಿತವಾಗಿ ಹೊರಗೆ ಬನ್ನಿ” ಎಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ವಯಂಚಾಲಿತ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಯಿತು. ಇದರಿಂದ ಕೆಲ ಕಾಲ ರೈಲಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಒಬ್ಬ ವ್ಯಕ್ತಿಯ ಬೇಜವಾಬ್ದಾರಿ ತನದಿಂದಾಗಿ ಇಡೀ ರೈಲಿನ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು ಎಂದು ಸುಶಾಂತ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ, ತಕ್ಷಣವೇ ಸ್ಪಂದಿಸಿದ ರೈಲ್ವೆಯ ಅಲಾರಾಂ ಮತ್ತು ಆಟೋಮ್ಯಾಟಿಕ್ ಬ್ರೇಕ್ ತಂತ್ರಜ್ಞಾನವನ್ನು ಶ್ಲಾಘಿಸಿರುವ ಅವರು, ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಅತ್ಯುತ್ತಮ ವ್ಯವಸ್ಥೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿಗರೇಟ್ ಸೇದಿದ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಇತರರ ಜೀವದ ಜೊತೆ ಆಟವಾಡುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭಾರೀ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“>

