ನವದೆಹಲಿ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಜೂನ್ 26ರಂದು ಬೆಳಗ್ಗೆ ಸುಮಾರು 6.40ಕ್ಕೆ ನಡೆದಿದ್ದು, ಅದರ ಸಿಸಿಟಿವಿ ದೃಶ್ಯ ಇದೀಗ ಬಹಿರಂಗವಾಗಿದೆ.
24 ಸೆಕೆಂಡ್ಗಳ ಸಿಸಿಟಿವಿ ದೃಶ್ಯದಲ್ಲಿ ಎರಡು ಟ್ಯಾಂಕರ್ಗಳು ಟೋಲ್ ಪ್ಲಾಜಾಕ್ಕೆ ಬರುತ್ತಿರುವುದು ಕಾಣುತ್ತದೆ. ಈ ವೇಳೆ ಅವುಗಳಲ್ಲಿ ಒಂದು ಟ್ಯಾಂಕರ್ ಏಕಾಏಕಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ನೇರವಾಗಿ ಟೋಲ್ ಬೂತ್ಗೆ ನುಗ್ಗುತ್ತದೆ.ಡಿಕ್ಕಿಯ ನಂತರ ಟ್ಯಾಂಕರ್ನಿಂದ ಎಲ್ಪಿಜಿ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ದಟ್ಟ ಹೊಗೆ ಮತ್ತು ಅಗ್ನಿಜ್ವಾಲೆಗಳು ಇಡೀ ಪ್ರದೇಶವನ್ನು ಆವರಿಸಿವೆ. ಬೆಂಕಿಯ ಜ್ವಾಲೆಗಳು ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳದ ವಾಹನಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.ದುರ್ಘಟನೆಯಲ್ಲಿ ಟ್ಯಾಂಕರ್ ಚಾಲಕ 40 ವರ್ಷದ ಧರ್ಮೇಂದ್ರ ದುಬೆ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ಅಲೋಕ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಇತರ ಟೋಲ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ ಐದಕ್ಕೆ ಏರಿದೆ.
ಸ್ಫೋಟದ ಪರಿಣಾಮ ಟೋಲ್ ಪ್ಲಾಜಾ ಸಮೀಪ ನಿಲ್ಲಿಸಿದ್ದ 16 ಬೈಕ್ಗಳು ಹಾಗೂ ಎರಡು ಕಾರುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.ಘಟನೆಯ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕೆಲಕಾಲ ವಾಹನಗಳನ್ನು ಟೋಲ್ ಶುಲ್ಕವಿಲ್ಲದೆ ಸಂಚರಿಸಲು ಅಧಿಕಾರಿಗಳು ಅವಕಾಶ ನೀಡಿದರು. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತಾಂತ್ರಿಕ ತಜ್ಞರ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

