ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿತ್ತು. ಕೆಜಿಎಫ್ ಚಿತ್ರ ಸರಣಿಯ ಬೃಹತ್ ಗೆಲುವು ಈ ಹೈಪ್ಗೆ ಪ್ರಮುಖ ಕಾರಣವಾಗಿದ್ದರೆ, ಯಶ್ ಸಾಮಾನ್ಯ ಕಥೆಗಳನ್ನು ಆರಿಸಿಕೊಂಡಿರುವುದಿಲ್ಲ ಎಂಬ ಸಿನಿ ಪ್ರಿಯರಲ್ಲಿನ ನಂಬಿಕೆ ಈ ಹೈಪ್ಗೆ ಮತ್ತೊಂದು ಕಾರಣವಾಗಿತ್ತು.
ಇನ್ನು ಚಿತ್ರ ಬಿಡುಗಡೆಯ ಬಳಿಕ ಈ ಹೈಪ್ಗೆ ತಕ್ಕ ಪ್ರತಿಕ್ರಿಯೆ ಸಿನಿಮಾಗೆ ದೊರೆಯಲಿಲ್ಲ, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಅತಿಯಾದ ನೆಗೆಟಿವ್ ವಿಮರ್ಶೆಗಳು ಹರಿದುಬಂದವು. ಬಳಿಕ ಸಾಮಾನ್ಯ ಸಿನಿ ರಸಿಕರು ಚಿತ್ರ ವೀಕ್ಷಿಸಿ ಚಿತ್ರ ವಿಮರ್ಶೆಗಳ ಹಾಗೆ ಇಲ್ಲ, ಚೆನ್ನಾಗಿಯೇ ಇದೆ, ಇದೊಂದು ಹಾಲಿವುಡ್ ಟ್ರೀಟ್ಮೆಂಟ್ ಇರುವ ಚಿತ್ರವಾಗಿದ್ದು, ಸರಿಯಾದ ರೀತಿಯಲ್ಲಿ ಸಿನಿಮಾ ವೀಕ್ಷಿಸಿ ಅರ್ಥೈಸಿಕೊಳ್ಳಿ ಎಂದರು.
ಹೀಗೆ ಟಾಕ್ಸಿಕ್ ವಿರುದ್ಧ ಹರಿದುಬಂದ ನೆಗೆಟಿವ್ ರಿವ್ಯೂಗಳ ಪೈಕಿ ತೆಲುಗು ವಿಮರ್ಶೆಗಳ ಕುರಿತು ಕನ್ನಡ ಸಿನಿ ರಸಿಕರಲ್ಲಿ ಹಾಗೂ ಯಶ್ ಅಭಿಮಾನಿಗಳಲ್ಲಿ ಅಸಮಾಧಾನವಿತ್ತು. ಏಕೆಂದರೆ ಚಿತ್ರದ ಮೊದಲ ಪ್ರದರ್ಶನ ಭಾರತದಲ್ಲಿ ಎಲ್ಲೂ ಮುಗಿದೇ ಇರಲಿಲ್ಲ, ಆಗಲೇ ನೆಗೆಟಿವ್ ವಿಮರ್ಶೆಗಳನ್ನು ಬೇಕಂತಲೇ ಹರಿದುಬಿಟ್ಟರು, ಇದು ಯಶ್ ಬೆಳವಣಿಗೆಯ ವಿರುದ್ಧದ ಷಡ್ಯಂತ್ರ ಎಂದರು.
ಇದೇ ವಿಚಾರ ಇತ್ತೀಚೆಗಷ್ಟೆ ಯಶ್ ತಾಯಿ ನಡೆಸಿದ ಪತ್ರಿಕಾಗೋಷ್ಠಿಯಲ್ಲೂ ಸಹ ಕೇಳಿಬಂತು. ಪತ್ರಕರ್ತರು ಯಶ್ ವಿರುದ್ಧ ಷಡ್ಯಂತ್ರ ನಡೆದಿದೆಯಾ ಎಂದು ಕೇಳಿದಾಗ ಷಡ್ಯಂತ್ರ ಮಾಡುವುದ್ಕಕಾಗುವುದಿಲ್ಲ, ಯಶ್ ಅದನ್ನೆಲ್ಲ ದಾಟಿ ಬೆಳೆದಿದ್ದಾನೆ, ಒಂದುವೇಳೆ ಷಡ್ಯಂತ್ರ ಇದ್ದಿದ್ದೇ ಆದರೆ ಏನು ಮಾಡೋಕಾಗುತ್ತೆ? ಒಬ್ಬ ಡ್ರೈವರ್ ಮಗನಿಗೆ ಇಷ್ಟೆಲ್ಲ ಹೆದರಿಕೊಳ್ಳಬೇಕಾ? ಹಾಗಾದ್ರೆ ಯಶ್ ಎಂದರೆ ಅವರಿಗೆ ಎಷ್ಟು ಭಯವಿದೆ? ಎಂದಿದ್ದರು. ಅಲ್ಲದೇ ಟಾಕ್ಸಿಕ್ ಸಿನಿಮಾ ಗ್ರೋನ್ಅಪ್ಸ್ಗೆ ಮಾತ್ರ ಎಂದು ಮೊದಲೇ ಹೇಳಿದ್ದರೂ ಫ್ಯಾಮಿಲಿ ಜತೆ ನೋಡುವಂತಿಲ್ಲ ಎಂದು ಟೀಕಿಸುತ್ತಿದ್ದಾರೆ ಎಂಬ ವಿಷಯದ ಕುರಿತು ಮಾತನಾಡಿದ ಪುಷ್ಪ ಅವರು ಅವರೆಲ್ಲ ಅಬ್ನಾರ್ಮಲ್ಗಳು ಎಂದಿದ್ದರು. ಈ ಕಾರಣಕ್ಕೆ ಯಶ್ ತಾಯಿ ಪುಷ್ಪ ಸುದ್ದಿಗೋಷ್ಟಿ ವೈರಲ್ ಆಗಿತ್ತು.
ಅಲ್ಲದೇ ಈ ಹಿಂದೆ ಯಶ್ ಕೆಜಿಎಫ್ ಬರುವ ಮುನ್ನ ಎಷ್ಟು ದೊಡ್ಡ ಹೀರೋ ರೀ ಎಂದು ಹೇಳಿಕೆ ನೀಡಿದ್ದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ಗೆ ಈ ಹೇಳಿಕೆ ಪರೋಕ್ಷ ತಿರುಗೇಟು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡರು ಹಾಗೂ ಕೆಲ ತೆಲುಗು ಮಾಧ್ಯಮಗಳು ಈ ರೀತಿ ಸುದ್ದಿ ಮಾಡಿದವು.
ಹೀಗೆ ತೆಲುಗು ಸಿನಿಮಾ ಮಂದಿಗೂ ಸಹ ತಲುಪಿದ ಈ ಸಂದರ್ಶನದ ಕುರಿತು ತೆಲುಗಿನ ಜನಪ್ರಿಯ ಆಕಾಶವಾಣಿ ಎಂಬ ಸಿನಿಮಾ ಪೇಜ್ ಪ್ರತಿಕ್ರಿಯಿಸಿದ್ದು, ಟಾಕ್ಸಿಕ್ ಜನರಿಗೆ ಹಿಡಿಸಲಿಲ್ಲ, ಅವರ ತೀರ್ಪನ್ನು ಒಪ್ಪಿಕೊಂಡು ಮುನ್ನಡೆಯುವುದು ಕಷ್ಟವೇ? ಎಂದು ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಆಕಾಶವಾಣಿ ಯಶ್ ತಾಯಿ ಮಾಧ್ಯಮಗಳ ಮುಂದೆ ಬಂದು ಅಭಿಮಾನಿಗಳ ಹಾಗೆ ಸಿಲ್ಲಿ ಕಾರಣಗಳನ್ನು ಮುಂದಿಟ್ಟು ಮಾತನಾಡುವುದು ನಾನ್ಸೆನ್ಸ್ ಎಂದಿದೆ.
ಇನ್ನು ಅಲ್ಲು ಅರವಿಂದ್ ಹೇಳಿದ್ದು ಚಿತ್ರ ಚೆನ್ನಾಗಿದ್ದರೆ ಯಾರಾದರೂ ಸ್ಟಾರ್ ಆಗಬಹುದು, ಉದಾಹರಣೆಗೆ ಯಶ್ ಕೆಜಿಎಫ್ ಬರುವ ಮುನ್ನ ಎಷ್ಟೋ ಜನರಿಗೆ ಗೊತ್ತಿರಲಿಲ್ಲ, ಆ ಒಂದು ಚಿತ್ರದಿಂದ ಅವರು ಸ್ಟಾರ್ ಆದರು ಎಂದು ಹೇಳಿ ಎಷ್ಟೋ ಜನರಿಗೆ ಸ್ಪೂರ್ತಿ ತುಂಬುವ ಮಾತುಗಳನ್ನು ಆಡಲಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಅದನ್ನೇ ನೆಗೆಟಿವ್ ಆಗಿ ಕನ್ನಡ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ.
ಇದೇ ಅಲ್ಲು ಅರವಿಂದ್ ಕನ್ನಡದ ಕಾಂತಾರ ಹಾಗೂ ಮಹಾವತಾರ್ ನರಸಿಂಹ ಚಿತ್ರಗಳನ್ನು ತೆಲುಗು ರಾಜ್ಯಗಳಲ್ಲಿ ವಿತರಿಸಿದರು, ಇಂಥವರು ಹೇಗೆ ಕನ್ನಡ ಚಿತ್ರದ ವಿರುದ್ಧ ನೆಗೆಟಿವ್ ವಿಮರ್ಶೆ ಷಡ್ಯಂತ್ರ ಮಾಡಲು ಸಾಧ್ಯ? ಚಿತ್ರ ಚೆನ್ನಾಗಿದ್ದರೆ ಜನರು ಮೆಚ್ಚಿಕೊಂಡು ಹೊಗಳುತ್ತಾರೆ, ಇಲ್ಲದಿದ್ದರೆ ಟ್ರೋಲ್ ಮಾಡಿ ಟೀಕಿಸುತ್ತಾರೆ, ಈ ಸತ್ಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು, ವಿಕ್ಟಿಮ್ ಕಾರ್ಡ್ ಬಳಸಿ ಕನಿಕರ ಸೃಷ್ಟಿಸುವ ಯತ್ನ ಮಾಡಬಾರದು ಎಂದು ಪೋಸ್ಟ್ ಮಾಡಿದೆ.

