ಮುಂಬೈ: ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ, ಆಫೀಸ್ಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ವರ್ಕ್ ಫ್ರಮ್ ಹೋಮ್ (WFH) ಕೇಳಿದ ಉದ್ಯೋಗಿಯೊಬ್ಬನಿಗೆ ಕಂಪನಿಯ ಸಿಇಒ ನೇರವಾಗಿ ಕೆಲಸದಿಂದಲೇ ಕಿತ್ತೊಗೆದಿರುವ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಇಮೇಲ್ ಸ್ಕ್ರೀನ್ಶಾಟ್ ಭಾರಿ ವೈರಲ್ ಆಗುತ್ತಿದ್ದು, ಕಾರ್ಪೊರೇಟ್ ಜಗತ್ತಿನ ಕ್ರೂರ ನೀತಿಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವ್ಯಾಟ್ಸಾಪ್ನಲ್ಲಿ ಮೆಸೇಜ್ ಹಾಕಿದ್ದ ಉದ್ಯೋಗಿ:
ಪ್ರತೀಶ್ ಶೆಟ್ಟಿ ಎಂಬ ಉದ್ಯೋಗಿ ಮುಂಬೈನ ಭಾರಿ ಮಳೆಗೆ ತುತ್ತಾಗಿ ಆಫೀಸ್ಗೆ ಹೋಗಲು ಸಾಧ್ಯವಾಗದೆ ಬೆಳಗ್ಗೆ ತನ್ನ ಮ್ಯಾನೇಜರ್ಗೆ ವ್ಯಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿದ್ದಾನೆ. ಸರ್, ಅಪಾರ್ಟ್ಮೆಂಟ್ ಸುತ್ತ ನೀರು ತುಂಬಿಕೊಂಡಿದೆ. ಹೊರಗಡೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಇಂದು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿ, ನನ್ನ ಕೆಲಸದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ” ಎಂದು ವಿನಂತಿಸಿಕೊಂಡು ಮ್ಯಾನೇಜರ್ ಉತ್ತರದ ಹಾದಿ ಕಾಯುತ್ತಿದ್ದಾನೆ.
ಮ್ಯಾನೇಜರ್ ಬದಲು ಸಿಇಒನಿಂದ ಬಂತು ಶಾಕಿಂಗ್ ಇಮೇಲ್
ಮ್ಯಾನೇಜರ್ನಿಂದ ಯಾವುದೇ ರಿಪ್ಲೈ ಬಾರದಿದ್ದಾಗ ಚಡಪಡಿಸುತ್ತಿದ್ದ ಪ್ರತೀಶ್ಗೆ ನೇರವಾಗಿ ಕಂಪನಿಯ ಸಿಇಒ ಕಡೆಯಿಂದಲೇ ಅಧಿಕೃತ ಇಮೇಲ್ ಬಂದಿದೆ. ಆದರೆ ಆ ಇಮೇಲ್ ಓದಿದ ಪ್ರತೀಶ್ಗೆ ಒಂದು ಕ್ಷಣ ತಲೆ ಸುತ್ತು ಬಂದಂತಾಗಿದೆ. ಸಿಇಒ ಕಳುಹಿಸಿದ ಇಮೇಲ್ನಲ್ಲಿ ಹೀಗಿತ್ತು:
ಪ್ರತೀಶ್ ಶೆಟ್ಟಿ, ನೀವು ಕಳುಹಿಸಿದ ವ್ಯಾಟ್ಸಾಪ್ ಮೆಸೇಜ್ ನಮಗೆ ಸಿಕ್ಕಿದೆ. ನಿಮ್ಮ ಮನವಿ ಕುರಿತು ಗಂಭೀರವಾಗಿ ಚರ್ಚಿಸಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಈ ಕಂಪನಿಗೆ ಕೆಲಸಕ್ಕೆ ಸೇರುವ ಮುನ್ನ ನಿಮಗೆ ಹೇಗೆ ಈಜಬೇಕು (Swimming) ಎಂಬುದು ತಿಳಿದಿರಬೇಕಿತ್ತು. ಆದ್ದರಿಂದ ನಿಮ್ಮನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಲಾಗಿದೆ. ನೀವು ಮನೆಯಲ್ಲೇ ಇರಿ

ಮುಂದಿನ ಬಾರಿ ಲಿಂಕ್ಡ್ಇನ್ನಲ್ಲಿ ಈಜು ಬರುತ್ತದೆ ಎಂದು ಹಾಕ್ತೀನಿ
ಕೆಲಸ ಕಳೆದುಕೊಂಡ ಬಳಿಕ ಪ್ರತೀಶ್ ಶೆಟ್ಟಿ ಈ ಇಮೇಲ್ ಸ್ಕ್ರೀನ್ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಂಪನಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ. “ನಾನೀಗ ಈಜಾಡುವುದನ್ನು ಕಲಿಯುತ್ತಿದ್ದೇನೆ. ಮುಂದಿನ ಬಾರಿ ಲಿಂಕ್ಡ್ಇನ್ ಪ್ರೊಫೈಲ್ ಅಪ್ಡೇಟ್ ಮಾಡುವಾಗ ‘ನನಗೆ ಈಜು ಬರುತ್ತದೆ’ ಎಂದು ದಾಖಲಿಸಿ ಬೇರೆ ಕಂಪನಿಗಳಿಗೆ ಅರ್ಜಿ ಹಾಕುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, “ಕೆಲಸಕ್ಕೆ ಅಪ್ಲೈ ಮಾಡುವ ಮುನ್ನ ಸ್ವಿಮ್ಮಿಂಗ್ ಕಲಿಯುವುದು ಕಡ್ಡಾಯ ಅನಿಸುತ್ತೆ” ಎಂದು ಕಂಪನಿಗೆ ತರಾಟೆಗೆ ತಗೆದುಕೊಂಡಿದ್ದಾರೆ.
ನೆಟ್ಟಿಗರ ಆಕ್ರೋಶ:
ಕೇವಲ ಮಳೆಯ ಕಾರಣಕ್ಕೆ ವರ್ಕ್ ಫ್ರಮ್ ಹೋಮ್ ಕೇಳಿದ್ದಕ್ಕೆ ಕೆಲಸದಿಂದಲೇ ಕಿತ್ತು ಹಾಕುವುದು ಎಷ್ಟು ಸರಿ? ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. “ಅನುಮತಿ ನಿರಾಕರಿಸಬಹುದಿತ್ತು, ಅದನ್ನು ಬಿಟ್ಟು ಕೆಲಸದಿಂದ ತೆಗೆಯುವುದು ಅಮಾನವೀಯ. ಇಂತಹ ವಿಷಕಾರಿ (Toxic) ಕಂಪನಿಗಳಲ್ಲಿ ಕೆಲಸ ಮಾಡದೇ ಇರುವುದೇ ಒಳಿತು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

