ತಮಿಳುನಾಡು ರಾಜಕೀಯದಲ್ಲಿ ಗಂಟೆಗೊಂದು ಹೊಸ ಸುದ್ದಿಗಳು ಕೇಳಿಬರುತ್ತಿದೆ. ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಮುಖ್ಯಸ್ಥ ವಿಜಯ್ ಸರ್ಕಾರ ರಚಿಸಲು ಸರ್ಕಸ್ ನಡೆಸುತ್ತಿದ್ದು, ಇನ್ನೂ ಸಹ ಸ್ಪಷ್ಟ ಬಹುಮತ ಸಾಬೀತುಪಡಿಸಿಲ್ಲ.
ರಾಜ್ಯಪಾಲರ ಬಳಿ ಈಗಾಗಲೇ ಎರಡು ಬಾರಿ ತೆರಳಿರುವ ವಿಜಯ್ ಇನ್ನೂ ಸಹ ವಿಶ್ವಾಸಮತ ಮಂಡಿಸುವಲ್ಲಿ ಯಶಸ್ವಿಯಾಗದೇ ಇದ್ದು, ಇಂದು ( ಮೇ 7 ) ಪ್ರಮಾಣವಚನ ಎನ್ನಲಾಗುತ್ತಿದ್ದ ಸುದ್ದಿಗಳು ತಣ್ಣಗಾಗಿವೆ.
ಇನ್ನು ಟಿವಿಕೆಗೆ ಕಾಂಗ್ರೆಸ್ ಬೆಂಬಲದ ಹಸ್ತ ಚಾಚಿದ್ದು, ಇನ್ನುಳಿದ ಸಣ್ಣ ಪಕ್ಷಗಳ ಬೆಂಬಲ ಟಿವಿಕೆಗೆ ಇದೆ ಎನ್ನಲಾಗುತ್ತಿದೆ.
ಹೀಗೆ ಗೊಂದಲದ ಗೂಡಾಗಿರುವ ತಮಿಳುನಾಡು ರಾಜಕಾರಣದ ಬಗ್ಗೆ ಜೋಹೊ ಸಹ ಮಾಲೀಕ ಶ್ರೀಧರ್ ವೆಂಬು ಟ್ವೀಟ್ ಮಾಡಿದ್ದು, ‘ಟಿವಿಕೆ ಬಳಿ ಸ್ಪಷ್ಟ ಬಹುಮತಕ್ಕೆ ಬೇಕಾದ ಸಂಖ್ಯೆಗಳಿಲ್ಲ. ಯಾವುದೇ ಸರ್ಕಾರ ರಚನೆಯಾದರೂ ಸಹ ಒಳ ಕಿತ್ತಾಟ ಹಾಗೂ ಒತ್ತಡಗಳಿಂದ ಸರ್ಕಾರ ಬೀಳುವ ಸಾಧ್ಯತೆ ಇದೆ. ತಮಿಳುನಾಡಿಗೆ ಇದಕ್ಕಿಂತ ಒಳ್ಳೆಯ ಆಡಳಿತದ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಹಣ ಹಂಚಿಕೆಯಾಗದಂತೆ ಮರು ಚುನಾವಣೆ ನಡೆಸಬೇಕು. ಅಗ ಜನರ ನಿಜವಾದ ಬೆಂಬಲ ಯಾರಿಗೆ ಎಂಬುದು ಸ್ಪಷ್ಟವಾಗಲಿದೆ. ಟಿವಿಕೆ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಇದನ್ನು ತಡೆಯಲು ಇಚ್ಛಿಸಿದರೆ ಡಿಎಂಕೆ ಹಾಗೂ ಎಐಎಡಿಎಂಕೆ ಒಟ್ಟಾಗಿ ಸ್ಪರ್ಧಿಸಲಿ. ಹಾಗೆಯೇ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕು. ಅವರಿಗೆ ಶೂನ್ಯ ಸ್ಥಾನ ಸಿಕ್ಕರೂ ಪರವಾಗಿಲ್ಲ, ಅವರಿಗೆ ಹೊಸದಾಗಿ ತಮಿಳುನಾಡಿನಲ್ಲಿ ರಾಜಕೀಯ ಆರಂಭಿಸುವ ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

