ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಪ್ರತ್ಯೇಕ ದುರಂತ ಘಟನೆಗಳಲ್ಲಿ ಅಕಾಲಿಕವಾಗಿ ಜೀವ ಕಳೆದುಕೊಂಡ ಇಬ್ಬರು ಯುವತಿಯರ ಮನೆಗಳಿಗೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಹೆಚ್.ರವಿಕುಮಾರ್ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಸಾಗರ ತಾಲ್ಲೂಕಿನ ನೆಲ್ಲಿಬೀಡ್ ಗ್ರಾಮದ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬದುಕಿ ಬಾಳಬೇಕಾಗಿದ್ದ ಕುಮಾರಿ ಅರ್ಚನಾ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ತಂದೆ ನೀಲ್ ಕುಮಾರ್ ಜೈನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿಕುಮಾರ್ ಅವರು ನೆಲ್ಲಿಬೀಡ್ಗೆ ತೆರಳಿ, ಸಂಕಷ್ಟದಲ್ಲಿರುವ ಅರ್ಚನಾ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿ ಆರ್ಥಿಕ ಸಹಾಯ ನೀಡಿದರು.
ಬೆಳಮಕ್ಕಿ ಗ್ರಾಮದ ವಾಣಿಶ್ರೀ ಮನೆಗೆ ರವಿಕುಮಾರ್ ಭೇಟಿ
ಈಡಿಗ ಸಮುದಾಯದ ಯುವತಿ ವಾಣಿಶ್ರೀ ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ತಿಳಿದಂತ ಸಾಗರ ತಾಲ್ಲೂಕು ಈಡಿಗ ಸಮುದಾಯದ ಅಧ್ಯಕ್ಷರಾದಂತ ರವಿ ಕುಮಾರ್ ಅವರು, ಇಂದು ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೃತ ಯುವತಿ ವಾಣಿಶ್ರೀ ಅವರ ತಂದೆ-ತಾಯಿ, ಅಜ್ಜ-ಅಜ್ಜಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಧೈರ್ಯತುಂಬಿ, ತಮ್ಮ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ನ್ಯಾಯ ಸಿಕ್ಕೇ ಸಿಗಲಿದೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ
ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್ ಅವರು, "ತುಂಬು ಯೌವನದಲ್ಲಿ, ಬದುಕು ಕಟ್ಟಿಕೊಳ್ಳಬೇಕಾಗಿದ್ದ ಇಬ್ಬರು ಹೆಣ್ಣುಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ಈ ಆಘಾತವನ್ನು ಭರಿಸುವ ಶಕ್ತಿಯನ್ನು ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರು ಅವರ ಕುಟುಂಬಸ್ಥರಿಗೆ ಕರುಣಿಸಲಿ. ಇಂತಹ ದುಃಖದ ಸಂದರ್ಭದಲ್ಲಿ ಇಡೀ ಸಮಾಜ ನಿಮ್ಮ ಬೆಂಬಲಕ್ಕಿದೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು, ಸದಾ ನಿಮ್ಮೊಂದಿಗೆ ನಾವಿರುತ್ತೇವೆ" ಎಂದು ಅಭಯ ನೀಡಿದರು.
ಇನ್ನೂ ಯುವತಿ ವಾಣಿಶ್ರೀ ಆತ್ಮಹತ್ಯೆಗೆ ಕಾರಣವಾದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಲಿದೆ. ನ್ಯಾಯ ಇಂದಲ್ಲ ನಾಳೆ ಸಿಕ್ಕೇ ಸಿಗಲಿದೆ. ಧೈರ್ಯದಿಂದ ಇರುವಂತೆ ಪೋಷಕರನ್ನು ಸಂತೈಸಿದರು.
ಈ ಸಂದರ್ಭದಲ್ಲಿ ಮಾಜಿ ಕೆಡಿಪಿ ಸದಸ್ಯ ದೇವರಾಜ್ ಕಬದೂರು, ತಾಲ್ಲೂಕು ಪಶುಸಂಗೋಪನೆ ಇಲಾಖೆಯ ನಾಮನಿರ್ದೇಶಿತ ಸದಸ್ಯ ಜಾಕಿ ಗಣೇಶ್, ರಘುಪತಿ ತೇಖಲೆ ಹಾಗೂ ಸಮಾಜ ಸೇವಕ ಕೃಷ್ಣ ಭಂಡಾರಿ ತುಮರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

