ಬಿಹಾರದ ಗಯಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಗುರ್ಪಾ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಗುಹೆಯೊಂದರಲ್ಲಿ ಅಡಗಿದ್ದ ಜನರ ಮೇಲೆ ಸಿಡಿಲು ಅಪ್ಪಳಿಸಿ ಒಬ್ಬ ವ್ಯಕ್ತಿ ಮೃತಪಟ್ಟು, ಸುಮಾರು 24 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಕ್ಷಾಬಂಧನ ಹಬ್ಬದ ಅಂಗವಾಗಿ ಬಂಧು-ಮಿತ್ರರ ಮನೆಗೆ ಬಂದಿದ್ದ ಅನೇಕ ಸ್ಥಳೀಯರು ಈ ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಭಾರಿ ಮಳೆ ಸುರಿಯಲು ಪ್ರಾರಂಭಿಸಿದಾಗ ಪ್ರವಾಸಿಗರು ಮರಗಳ ಕೆಳಗೆ ಹಾಗೂ ಬೆಟ್ಟದ ಗುಹೆಗಳಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಗುಹೆಯೊಂದರ ಸಮೀಪ ಭೀಕರ ಸಿಡಿಲು ಬಡಿದು ಈ ದುರಂತ ಸಂಭವಿಸಿದೆ.
ದುರಂತದಲ್ಲಿ ಬೆಲಾಗಂಜ್ ಮೂಲದ 26 ವರ್ಷದ ವಿಕಾಸ್ ಕುಮಾರ್ ಅಲಿಯಾಸ್ ನಿವಾಸ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಭದ್ರತಾ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ಸೇರಿ 24 ಜನರು ಗಾಯಗೊಂಡಿದ್ದಾರೆ. ಸಿಡಿಲು ಬಡಿದ ತಕ್ಷಣ ಸ್ಥಳದಲ್ಲಿ ತೀವ್ರ ಆತಂಕ ಹಾಗೂ ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದ್ದರೂ, ಯಾವುದೇ ಕಾಲ್ತುಳಿತ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಆಂಬ್ಯುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿದ್ದಾರೆ. ಬೆಟ್ಟದ ತುದಿಯಲ್ಲಿದ್ದ ಗಾಯಾಳುಗಳನ್ನು ಸ್ಥಳೀಯ ಸಾರ್ವಜನಿಕರು ತಮ್ಮ ಹೆಗಲ ಮೇಲೆ ಹೊತ್ತು ಕೆಳಗೆ ತಂದಿರುವುದು ವಿಶೇಷವಾಗಿತ್ತು.
ಗಾಯಗೊಂಡ 10 ರಿಂದ 55 ವರ್ಷ ವಯೋಮಾನದ ಸಂತ್ರಸ್ತರನ್ನು ಫತೇಪುರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಂಕಿ ಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ 16 ವರ್ಷದ ರೂಪಾ ಕುಮಾರಿ ಸೇರಿದಂತೆ ನಾಲ್ವರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಯಾದ ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಥಮ ಚಿಕಿತ್ಸೆಯ ನಂತರ ಚೇತರಿಸಿಕೊಂಡ ಇತರ ಗಾಯಾಳುಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

