ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಮತ್ತು ಮುಂದಿನ ದಿನಗಳಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ (ಬುಧವಾರ, ಜುಲೈ 8) ಒಂದು ದಿನದ ರಜೆ ಘೋಷಿಸಲಾಗಿದೆ .
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಅವರು ಈ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಯಾವೆಲ್ಲಾ ಶಾಲಾ-ಕಾಲೇಜುಗಳಿ ರಜೆ ಅನ್ವಯ?
ಸಾಗರ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಒಡೆತನದ ಸಂಸ್ಥೆಗಳಿಗೆ ರಜೆ ಅನ್ವಯಿಸಲಿದ್ದು, ವಿವರ ಹೀಗಿದೆ:
ಎಲ್ಲಾ ಅಂಗನವಾಡಿ ಕೇಂದ್ರಗಳು
ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು
ಎಲ್ಲಾ ಪದವಿಪೂರ್ವ (ಪಿಯುಸಿ) ಕಾಲೇಜುಗಳು
ಎಲ್ಲಾ ಡಿಪ್ಲೊಮಾ ಕಾಲೇಜುಗಳು
ಮುಂದಿನ ರಜಾದಿನಗಳಲ್ಲಿ ತರಗತಿ ಹೊಂದಾಣಿಕೆಗೆ ಸೂಚನೆ
ಮಳೆಯ ಮುಂಜಾಗ್ರತಾ ಕ್ರಮವಾಗಿ ಜುಲೈ 8 ರಂದು ಒಂದು ದಿನದ ರಜೆ ನೀಡಲಾಗಿದ್ದು, ಈ ದಿನದಂದು ನಡೆಯಬೇಕಾಗಿದ್ದ ಪಠ್ಯ ಚಟುವಟಿಕೆ ಹಾಗೂ ಪಾಠ ಪ್ರವಚನಗಳ ನಷ್ಟವನ್ನು ಸರಿದೂಗಿಸಲು ಮುಂದಿನ ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ತಹಶೀಲ್ದಾರ್ ಡಾ.ಪ್ರತಿಭಾ ಸೂಚಿಸಿದ್ದಾರೆ.
ಈ ಆದೇಶದ ಸೂಕ್ತ ಅನುಷ್ಠಾನಕ್ಕಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO) ಹಾಗೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು.

