ಮೈಸೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ನಡೆಸಿದ್ದ ಕೆಪಿಎಸ್ಸಿ ಅಕ್ರಮವನ್ನು ಗೃಹ ಸಚಿವರಾಗಿ ಬಂದು ಮುಖ್ಯ ಹಾಕಲು ಪ್ರಿಯಾಂಕ ಖರ್ಗೆ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ಪ್ರಿಯಾಂಕರ್ ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದಾಗ ನಡೆದಿದ್ದ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ವ್ಯಾಪಕ ಅಕ್ರಮ ಎಸೆಗಿದ್ದಾರೆ ಎಂದು ದೂರಿದರು.
ನಾನು ಪ್ರಿಯಾಂಕಾ ಖರ್ಗೆ ಅವರಿಗೆ ಕೇಳುತ್ತೇನೆ. ಈ ಅಯ್ಕೆಯ ಸಮಯದಲ್ಲಿ ಇಲಾಖೆ ಮಂತ್ರಿ ಇದ್ದವರು ಯಾರು? ಈ ಅಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮವಾಗಿರುವುದು ಹೊರಗೆ ಬಂದ ಮೇಲೆ ಗೃಹ ಇಲಾಖೆಯೇ ಬೇಕು ಎಂದು ಆ mಇಲಾಖೆಯನ್ನು ಪಡೆದುಕೊಂಡಿದ್ದೀರಿ. ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದಾಗ ಹಗರಣದ ಬಗ್ಗೆ ಯಾಕೆ ಮಾತನಾಡಲಿಲ್ಲ. ತಪ್ಪಿತಸ್ಥರ ವಿರುದ್ಧ ಎಫ್ಐಅರ್ ಯಾಕೆ ಹಾಕಲಿಲ್ಲ? ಅಕ್ರಮ ಆಗಿದೆ ಎಂದು ಫೋರೆನ್ಸಿಕ್ ಲ್ಯಾಬ್ ನಿಂದ ವರದಿ ಬಂದಿದ್ದರೂ ಎಫ್ಐಅರ್ ಹಾಕಲಿಲ್ಲ ಯಾಕೆ? ಎಂದು ಸಚಿವರು ಪ್ರಶ್ನಿಸಿದರು.
ಕೆಪಿಎಸ್ಸಿಯಲ್ಲಿ ನೀವು ಮಾಡಿರುವ ಹಗರಣವನ್ನು ಮುಚ್ಚಿ ಹಾಕುವುದಕ್ಕೆ ಗೃಹ ಇಲಾಖೆಯನ್ನು ಪಡೆದಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದ ಸಚಿವರು; ನನ್ನ ಕಾಲದಲ್ಲಿ ಪಾರದರ್ಶಕವಾಗಿತ್ತು ಎಂದು ಹೇಳುತ್ತಾರೆ. ಆದರೆ ನೆನ್ನೆ ದಿನ ಹೈಕೋರ್ಟ್ ನಲ್ಲಿ ನಿಮ್ಮ ಇಲಾಖೆಗೆ ಮಂಗಳಾರತಿಯಾಗಿದೆ. ನಿಮ್ಮ ಅಧಿಕಾರಿಗಳಿಗೆ ನ್ಯಾಯಾಲಯ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅದು ಏಕೆ ಎಂಬುದು ನಿಮಗೆ ಗೊತ್ತಿದೆಯಾ? ಮತ್ತೊಬ್ಬರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಬಗ್ಗೆ ಯೋಚನೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ಮಾತೆತ್ತಿದರೆ ಆರೆಸ್ಸೆಸ್ ನಿಂದ ದೇಶಕ್ಕೆ ಗಂಡಾಂತರ ಎಂದು ಹೇಳುತ್ತೀರಿ. ನಿಜಕ್ಕೂ ಈ ದೇಶಕ್ಕೆ ಗಂಡಾಂತರ ಇರುವುದು ಕಾಂಗ್ರೆಸ್ ಪಕ್ಷದಿಂದ. ನಮ್ಮ ಸಿದ್ದಾಂತದ ಬಗ್ಗೆ ಮಾತನಾಡುತ್ತೀರಾ? ನಿಮ್ಮ ಸಿದ್ದಾಂತ ನಮಗೆ ಗೊತ್ತಿಲ್ಲವೇ? ತಮಿಳುನಾಡಿನಲ್ಲಿ ಡಿಎಂಕೆ ಬಿಟ್ಟು, ಟಿವಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು ನಿಮ್ಮ ಸಿದ್ದಾಂತ? ನೀವು ಮಾಡಿರುವ ಅಕ್ರಮದ ಬಗ್ಗೆ ಮಾತನಾಡಿದರೇ ನೀವು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತೀರಾ?.ಬೇರೆಯವರ ಜತೆ ಮಾತನಾಡಿದ ರೀತಿ ನಮ್ಮ ಜೊತೆ ಮಾತನಾಡಬೇಡಿ. ಅಕ್ರಮ ಮಾಡಿ ಅದನ್ನು ಮುಚ್ಚಿಟ್ಟಿದ್ದೀರಿ..ಮೊದಲು ಅದರ ಬಗ್ಗೆ ಉತ್ತರ ಕೊಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ ಅವರು.
ಸತೀಶ್ ಜಾರಕಿಹೊಳಿ ಅವರಿಗೆ ಮಾಹಿತಿ ಇಲ್ಲ:
ರಾಜ್ಯ ಸರ್ಕಾರ ಮತ್ತು ನೈಸ್ ಕಂಪನಿ ಜತೆ ಇನ್ನೂ ಹತ್ತು ವರ್ಷ ಒಪ್ಪಂದವಿದೆ. ಹೀಗಾಗಿ ಹೀಗಾಗಿ ಟೋಲ್ ಸಂಗ್ರಹ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಹೇಳಿಕೆ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವರು ಮಾಹಿತಿ ಇಲ್ಲ. ಒಂದು ವೇಳೆ ವಿಷಯ ಗೊತ್ತಿಲ್ಲದಿದ್ದರೆ ಕಾನೂನು ತಜ್ಞರ ಜೊತೆ ಚರ್ಚಿಸಿ ಮಾಹಿತಿ ಪಡೆಯಬೇಕು. ಅದನ್ನು ಹೊರತುಪಡಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಫಲವತ್ತಾದ ಭೂಮಿ ಇದ್ದರೆ ಭೂಸ್ವಾಧೀನಕ್ಕೆ ಬಿಡುವುದಿಲ್ಲ:
ಕೆಐಎಡಿಬಿ ಮೈಸೂರಿನಲ್ಲಿ 169 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗೆ ಉದ್ದೇಶಕ್ಕೆ ವಶಪಡಿಸಿಕೊಳ್ಳುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಸಿದ ಸಚಿವ ಕುಮಾರಸ್ವಾಮಿ ಅವರು; ಆ ಭೂಮಿ ಫಲವತ್ತಾದ ಕೃಷಿ ಭೂಮಿಯಾಗಿದ್ದಾರೆ ಯಾವುದೇ ಕಾರಣಕ್ಕೂ ಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ. ಸ್ಥಳಕ್ಕೆ ನಾನೇ ಹೋಗಿ ರೈತರಿಗೆ ಬೆಂಬಲ ಕೊಡುತ್ತೇನೆ ಎಂದು ಎಚ್ಚರಿಸಿದರು.
ನಾನು ಸ್ಥಳಕ್ಕೆ ಹೋಗಿ ರೈತರ ಸಮಸ್ಯೆಯನ್ನು ಕೇಳುತ್ತೇನೆ. ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಬೇಕು ಎಂದು ಯೋಜನೆ ಹಾಕಿದ್ದೇನೆ. ಒಣಭೂಮಿ ಕೊಡಿ ಅಂತ ಹೇಳಿದ್ದೇನೆ. ಹಾಗಿದ್ದ ಮೇಲೆ ಇಲ್ಲಿ ಫಲವತ್ತಾದ ಭೂಮಿಯನ್ನು ಯಾಕೆ ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ವರುಣಾ ವ್ಯಾಪ್ತಿಯ ಮದರಗಳ್ಳಿ ಕೃಷಿ ಭೂಮಿಗೆ ನಾನು ಭೇಟಿ ಕೊಡುತ್ತೇನೆ ಎಂದು ಸಚಿವರು ಹೇಳಿದರು.

