Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ನಾಳೆ ನಡೆಯ ಬೇಕಿದ್ದ 'ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ'ದ ಚುನಾವಣೆಗೆ 'ಹೈಕೋರ್ಟ್ ತಡೆಯಾಜ್ಞೆ'

BIG NEWS: ನಾಳೆ ನಡೆಯ ಬೇಕಿದ್ದ 'ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ'ದ ಚುನಾವಣೆಗೆ 'ಹೈಕೋರ್ಟ್ ತಡೆಯಾಜ್ಞೆ'

Kannada News Now 2 months ago

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯವು (High Court) ನಾಳೆ ನಡೆಯಬೇಕಿದ್ದಂತ ಚುನಾವಣೆಗೆ ತಡೆ ನೀಡಿದೆ.

ಘಟನೆಯ ಹಿನ್ನೆಲೆ:

ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 13,000 ಶಿಕ್ಷಕರನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಂಘದ ಹಾಲಿ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಹಾಗೂ ಕಾರ್ಯದರ್ಶಿ ಚೇತನ್ ಅವರು ಪ್ರಜಾಸತ್ತಾತ್ಮಕವಾಗಿ ಚುನಾವಣೆ ಎದುರಿಸುವ ಬದಲು, ತಮಗೆ ವಿರುದ್ಧವಾಗಿರುವವರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂಬುದಾಗಿ ಹೈಕೋರ್ಟ್ ಗಮನಕ್ಕೆ ತರಲಾಗಿತ್ತು.

ಪ್ರಮುಖ ಆರೋಪಗಳು:

  • ಮತದಾರರ ಕೈಬಿಡುವಿಕೆ: ಉಡುಪಿ ಜಿಲ್ಲೆಯ ಇಡೀ ಜಿಲ್ಲೆಯ ಮತದಾರರನ್ನು ಹಾಗೂ ಹಾವೇರಿ ತಾಲೂಕಿನ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

  • ರಾಜಕೀಯ ಪ್ರೇರಿತ ಕ್ರಮ: ರಾಜ್ಯ ಮಟ್ಟದ ಪದಾಧಿಕಾರಿಗಳಾಗಿ ಸ್ಪರ್ಧಿಸಬಹುದಾದ ಸಂಭಾವ್ಯ ಅಭ್ಯರ್ಥಿಗಳಾದ ದಿನಕರ್ ಶೆಟ್ಟಿ (ಉಡುಪಿ), ರಾಜಶೇಖರ್ (ಹಾಸನ) ಹಾಗೂ ಬಿರಾದಾರ್ (ರಾಯಚೂರು) ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.

  • ಅಕ್ರಮ ಸೇರ್ಪಡೆ: ಚಳ್ಳಕೆರೆ ತಾಲೂಕಿನಲ್ಲಿ ಸಂಘದ ಉಪಾಧ್ಯಕ್ಷರಾಗಿರುವ ಮಾರುತೇಶ್ ಅವರ ಹೆಸರನ್ನು ರಾತ್ರೋರಾತ್ರಿ ಅಕ್ರಮವಾಗಿ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

  • ನಿಧಿ ದುರುಪಯೋಗ: ಶಿಕ್ಷಕರಿಂದ ಕಡಿತಗೊಳಿಸಲಾಗುವ ವಾರ್ಷಿಕ ಸದಸ್ಯತ್ವ ಶುಲ್ಕದ (₹200) ಪಾಲನ್ನು ತಾಲೂಕು ಮತ್ತು ಜಿಲ್ಲಾ ಸಂಘಗಳಿಗೆ ನೀಡದೆ ತಾರತಮ್ಯ ಎಸಗಲಾಗುತ್ತಿದೆ ಎಂಬ ದೂರು ಸಹ ಕೇಳಿಬಂದಿದೆ.

ನ್ಯಾಯಾಲಯದ ಮೆಟ್ಟಿಲೇರಿದ ಶಿಕ್ಷಕರು:

ಈ ಎಲ್ಲ ಅಕ್ರಮಗಳನ್ನು ಪ್ರಶ್ನಿಸಿ ದಿನಕರ್ ಶೆಟ್ಟಿ, ಹಾಸನದ ರಾಜಶೇಖರ್ ಸೇರಿದಂತೆ ರಾಜ್ಯದ ಸುಮಾರು 80ಕ್ಕೂ ಹೆಚ್ಚು ಶಿಕ್ಷಕರು ಮತ್ತು ಮಾಜಿ ಪದಾಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸದ್ಯಕ್ಕೆ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ದಿನಕರ್ ಶೆಟ್ಟಿ ಹೇಳಿದ್ದೇನು?

ಕರ್ನಾಟಕ ಹೈಕೋರ್ಟ್ ನೀಡಿದಂತ ತೀರ್ಪು ನ್ಯಾಯಕ್ಕೆ ಸಂದ ಜಯವಾಗಿದೆ. ಇದನ್ನು ಎಲ್ಲಾ ಶಿಕ್ಷಕರು ಸ್ವಾಗತಿಸಲಿದ್ದೇವೆ. ಹೈಕೋರ್ಟ್ ನೀಡಿದಂತ ತೀರ್ಪಿನಲ್ಲಿ ಹೊಸದಾಗಿ ಚುನಾವಣೆಗೆ ಅಧಿಸೂಚನೆ ಹೊರಡಿಸಲು ನಿರ್ದೇಶಿಸಿದೆ. ಜೊತೆಗೆ ಹೊಸದಾಗಿ ಮತದಾರರ ಪಟ್ಟಿಯನ್ನು ತಯಾರಿಸಿ ಅನುಮೋದನೆ ಪಡೆದು, ಯಾರನ್ನೆಲ್ಲ ಪಟ್ಟಿಯಿಂದ ಕೈಬಿಡಲಾಗಿದೆಯೋ ಅವರನ್ನೆಲ್ಲಾ ಸೇರ್ಪಡೆಗೆ ಸೂಚಿಸಿದೆ. ಆ ಬಳಿಕ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಸಲು ಹೈಕೋರ್ಟ್ ಆದೇಶಿಸಿದೆ ಎಂಬುದಾಗಿ ತಿಳಿಸಿದರು.

ಒಟ್ಟಾರೆಯಾಗಿ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆಯಿಂದಾಗಿ ನಾಳೆಯ ಇಡೀ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ರದ್ದಾದಂತೆ ಆಗಿದೆ. ಹೈಕೋರ್ಟ್ ನಿರ್ದೇಶನದಂತೆ ನೂತನ ಮತದಾರರ ಪಟ್ಟಿ ತಯಾರಿಸಿ, ಯಾರನ್ನೆಲ್ಲಾ ಕೈಬಿಡಲಾಗಿತ್ತೋ ಅವರನ್ನು ಸೇರ್ಪಡೆಗೊಳಿಸಿದ ಬಳಿಕ ಚುನಾವಣಾ ಅಧಿಸೂಚನೆ ಪ್ರಕಟಿಸಿ, ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Dailyhunt
Disclaimer: This content has not been generated, created or edited by Dailyhunt. Publisher: Kannada News Now