ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯು ಮಹತ್ವದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಸರ್ಕಾರದಿಂದ ನೇರವಾಗಿ ಹಾಗೂ ಪರೋಕ್ಷವಾಗಿ ನೇಮಕಗೊಂಡಿರುವ ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ನಲ್ಲಿ (Salary Package) ನೋಂದಾಯಿಸಿಕೊಳ್ಳುವ ಕಾಲಾವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲಾ ಅರ್ಹ 'ಎ', 'ಬಿ', 'ಸಿ' ಮತ್ತು 'ಡಿ' ಗುಂಪಿನ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ನಲ್ಲಿ ನೋಂದಾಯಿಸಿಕೊಳ್ಳಲು ಜೂನ್ 30, 2026 ಕೊನೆಯ ದಿನಾಂಕವಾಗಿತ್ತು. ಈ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳದ ಅಧಿಕಾರಿಗಳು/ನೌಕರರ ಸಂಬಳದ ವಿತರಣೆಯನ್ನು ತಡೆಹಿಡಿಯಲು ಈ ಹಿಂದೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು.
ಆಗಸ್ಟ್ 31ರವರೆಗೆ ಕಾಲಾವಕಾಶ ವಿಸ್ತರಣೆ:
ಆದರೆ, ರಾಜ್ಯದ ಹಲವು ಅಧಿಕಾರಿಗಳು ಮತ್ತು ನೌಕರರು ಸಂಬಳ ಪ್ಯಾಕೇಜ್ನಲ್ಲಿ ನೋಂದಾಯಿಸಿಕೊಳ್ಳಲು ಇನ್ನೂ ಹೆಚ್ಚಿನ ಕಾಲಾವಕಾಶವನ್ನು ಕೋರಿದ್ದರು. ನೌಕರರ ಈ ಮನವಿಯನ್ನು ಪುರಸ್ಕರಿಸಿರುವ ಆರ್ಥಿಕ ಇಲಾಖೆಯು, ಎಲ್ಲಾ 'ಎ', 'ಬಿ', 'ಸಿ' ಮತ್ತು 'ಡಿ' ಗುಂಪಿನ ಅರ್ಹ ನೌಕರರಿಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 31, 2026 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿದೆ.
ಆದೇಶದ ಪ್ರಮುಖಾಂಶ:
ಆರ್ಥಿಕ ಇಲಾಖೆಯ (ವಿತ್ತೀಯ ಸುಧಾರಣೆ) ಲೆಕ್ಕಾಧಿಕಾರಿಯಾದ ಎಸ್.ಆರ್. ನಲಿನ ಅವರು ದಿನಾಂಕ 30.06.2026 ರಂದು ಈ ಪ್ರಕಟಣೆ ಹೊರಡಿಸಿದ್ದು, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2 (HRMS-2) ಯೋಜನಾ ನಿರ್ದೇಶಕರಿಗೆ ಈ ಕುರಿತು ಅಗತ್ಯ ಕ್ರಮ ವಹಿಸಲು ಸೂಚಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದಾಗಿ ತಾಂತ್ರಿಕ ಅಥವಾ ಇತರೆ ಕಾರಣಗಳಿಂದ ಇನ್ನು ಕೂಡ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸದ ಸಾವಿರಾರು ಸರ್ಕಾರಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.

