Dailyhunt
ರಾಜ್ಯಾದ್ಯಂತ `ಉಪಶಮನ ಆರೈಕೆ' ವಿಸ್ತರಿಸಲು ತೀರ್ಮಾನ : ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ರಾಜ್ಯಾದ್ಯಂತ `ಉಪಶಮನ ಆರೈಕೆ' ವಿಸ್ತರಿಸಲು ತೀರ್ಮಾನ : ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Kannada News Now 4 days ago

ಬೆಂಗಳೂರು: ಮಾರಣಾಂತಿಕ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನೋವು ನಿವಾರಣೆ ಮತ್ತು ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನೂತನ 'ಪ್ಯಾಲಿಯೇಟಿವ್ ಕೇರ್' (ಉಪಶಮನಕಾರಿ ಆರೈಕೆ) ವಿಭಾಗವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಉದ್ಘಾಟಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ 'ಶರಣಂ ಇಂಡಿಯಾ' ಸಂಸ್ಥೆಯ ಸಹಭಾಗಿತ್ವದಲ್ಲಿ ಈ ನೂತನ ವಿಭಾಗವನ್ನು ಆರಂಭಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ, ಅಸಾಧಾರಣ ನೋವು ಹಾಗೂ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿರುವ ರೋಗಿಗಳಿಗೆ ಈ ಕೇಂದ್ರವು ಸಂಜೀವಿನಿಯಾಗಲಿದೆ.

ರಾಜ್ಯಾದ್ಯಂತ ವಿಸ್ತರಣೆಯ ಗುರಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, "ಉಪಶಮನ ಆರೈಕೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಬೆಂಗಳೂರಿನ 4-5 ಕಡೆಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಿದ್ದೇವೆ. ಇದು ಅನಗತ್ಯ ಆಸ್ಪತ್ರೆ ಭೇಟಿಗಳನ್ನು ಕಡಿಮೆ ಮಾಡುವುದಲ್ಲದೆ, ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬಗಳಿಗೆ ದೊಡ್ಡ ಆಸರೆಯಾಗಲಿದೆ," ಎಂದು ತಿಳಿಸಿದರು.

ಲಭ್ಯವಿರುವ ಪ್ರಮುಖ ಸೌಲಭ್ಯಗಳು:
ರೋಗಿಗಳು ಮತ್ತು ಅವರ ಕುಟುಂಬದವರ ಜೀವನದ ಗುಣಮಟ್ಟ ಸುಧಾರಿಸಲು ಈ ಕೇಂದ್ರದಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ:

ಹೊರರೋಗಿ ವಿಭಾಗ (OPD): ತಜ್ಞ ವೈದ್ಯರ ಮೂಲಕ ನೋವು ನಿವಾರಣೆ ಮತ್ತು ಆಪ್ತಸಮಾಲೋಚನೆ.

ಡೇ-ಕೇರ್ ಸೌಲಭ್ಯ: ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೆಯೇ ಮೂಲಭೂತ ಚಿಕಿತ್ಸೆ ಪಡೆಯುವ ವ್ಯವಸ್ಥೆ.

ಒಳರೋಗಿ ವಿಭಾಗ: ಸಂಕೀರ್ಣ ಆರೈಕೆ ಅಗತ್ಯವಿರುವವರಿಗಾಗಿ 6 ಹಾಸಿಗೆಗಳ ವಿಶೇಷ ವಾರ್ಡ್.

ಮನೆ-ಮನೆಗೆ ಆರೈಕೆ (Home Care): ಆಸ್ಪತ್ರೆಯ ಸುತ್ತಮುತ್ತಲಿನ 5 ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರಿ ಘಟಕದ ಮೂಲಕ ಮನೆಗೇ ತೆರಳಿ ಚಿಕಿತ್ಸೆ ನೀಡುವ ಸೌಲಭ್ಯ.

ಮಾನಸಿಕ-ಸಾಮಾಜಿಕ ಬೆಂಬಲ: ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಲು ವಿಶೇಷ ಪುನರ್ವಸತಿ ಕಾರ್ಯಕ್ರಮಗಳು.

Dailyhunt
Disclaimer: This content has not been generated, created or edited by Dailyhunt. Publisher: Kannada News Now